ADVERTISEMENT

ತುಕ್ಕು ಹಿಡಿದ ಯಂತ್ರೋಪಕರಣ !

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 8:58 IST
Last Updated 4 ಅಕ್ಟೋಬರ್ 2017, 8:58 IST

ಮುದ್ದೇಬಿಹಾಳ: ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯಾಗದ ಕಾರಣ, ಯಂತ್ರಗಳು ತುಕ್ಕು ಹಿಡಿದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡರ (ಜನತೆಯನ್ನು ನೋಡಿ ನಗುತ್ತಿರುವ !) ಭಾವಚಿತ್ರಗಳಿರುವ ಘಟಕ ಎಂದು ಶುರುವಾಗಿ, ಗ್ರಾಮಸ್ಥರಿಗೆ ಶುದ್ಧ ನೀರು ಸಿಗುತ್ತದೆಯೋ ಗೊತ್ತಿಲ್ಲ, ಆದರೆ, ಘಟಕದ ಒಂದೊಂದೇ ಅಮೂಲ್ಯ ಯಂತ್ರಗಳು ತುಕ್ಕು (ಜಂಗು) ಹಿಡಿದು ಹಾಳಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಘಟಕವನ್ನು ಭೂಸೇನಾ ನಿಗಮ ನಿರ್ಮಿಸಿದೆ. ಇನ್ನೂ ನಮಗೆ ಹಸ್ತಾಂತರಿಸಿಲ್ಲ. ₨ 20000 ಖರ್ಚು ಹಾಕಿ ಮೋಟರ್‌ ಕೂಡಿಸಿವ್ರೀ. ದೌಡ್ ಸುರು ಮಾಡ್ರಿ ಅಂತಾ ಮೊನ್ನೆ ಎಂಎಲ್‌ಎ ಸಾಹೇಬ್ರೂ ಹೇಳ್ಯಾರ, ತಾಲ್ಲೂಕು ಪಂಚಾಯ್ತಿ ಇ.ಓ, ಜಿಲ್ಲಾ ಪಂಚಾಯ್ತಿ ಸಿ.ಎಸ್. ಸಾಹೇಬ್ರೂ ಹೇಳ್ಯಾರೀ. ಮೂರು ದಿನದಾಗ ಕೆಲಸಾ ಮಾಡ್ತೀವಿ. ಅದಕ್ಕ ಇನ್ನೂ ನೀರಿನ ಸೌಲಭ್ಯ ಇಲ್ಲ’ ಎಂದು ಇಂಗಳಗೇರಿ ಪಿಡಿಓ ನಿಂಗಣ್ಣ ದೊಡಮನಿ ಹೇಳಿದರು.

‘ಈಗಾಗಲೇ ಸಮಯ ಮೀರಿ ಹೋಗಿದೆ, ಒಂದು ವಾರದಲ್ಲಿ ಘಟಕ ಶುರುವಾಗದಿದ್ದರೆ ಗ್ರಾಮದ ಜನರ ಜತೆಗೂಡಿ ಪ್ರತಿಭಟಿಸಬೇಕಾಗುತ್ತದೆ’ ಎಂದು ಗ್ರಾಮಸ್ಥರಾದ ಬಿ.ಎಸ್.ಮೇಟಿ, ಹೊನ್ನಪ್ಪ ಸರೂರ, ಸಂಗಣ್ಣ ಮಾಲಗತ್ತಿ, ಎಂ.ಎಂ.ಪೂಜಾರಿ, ಸೋಮಶೇಖರ ಮೇಟಿ, ಸಂಗಣ್ಣ ನಾಗಾವಿ, ದೇಸು ಮಾಲಗತ್ತಿ, ಹಸನ ಕಾರಕೂರ, ಗುರಣ್ಣ ಮಂಗ್ಯಾಳ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.