ADVERTISEMENT

ದೇಶಮುಖ ಅಭಿಮಾನಿಗಳಿಂದ ಪ್ರತಿಭಟನೆ

ಜೆಡಿಎಸ್‌ನಲ್ಲಿ ಭುಗಿಲೆದ್ದ ಬಂಡಾಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:18 IST
Last Updated 17 ಏಪ್ರಿಲ್ 2013, 10:18 IST

ಮುದ್ದೇಬಿಹಾಳ: ಜೆಡಿಎಸ್ ಅಭ್ಯರ್ಥಿ ಯಾಗಿ ಪ್ರಭುಗೌಡ ದೇಸಾಯಿ ಸೋಮವಾರ ನಾಮಪತ್ರ ಸಲ್ಲಿಸಿದ್ದು ಪಕ್ಷದಲ್ಲಿ ಬಂಡಾಯ ಬಯಲಿಗೆ ಬಂದಿದ್ದು ಮಾಜಿ ಸಚಿವೆ ವಿಮಲಾಬಾಯಿ  ದೇಶಮುಖ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಅವರ ಬೆಂಬಲಿಗರು ತಾಲ್ಲೂಕಿನ ನಾಲತವಾಡ ದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಕಳೆದ ಕೆಲವು ದಿನಗಳಿಂದ ಪಕ್ಷದ ಟಿಕೆಟ್‌ಗಾಗಿ ತೆರೆಮರೆಯ ಗುದ್ದಾಟ ಕಂಡು ಬಂದಿದ್ದು ಜೆಡಿಎಸ್‌ನಲ್ಲಿ ಮೊದಲಿನಿಂದಲೂ ಪ್ರಾಬಲ್ಯ ಹೊಂದಿ ರುವ ವಿಮಲಾಬಾಯಿ ಚುನಾವಣೆಗೆ ನಿಲ್ಲುವ ಬಗ್ಗೆ ಸ್ಪಷ್ಟವಾದ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ಕುಮಾರಸ್ವಾಮಿ ಅವರು ಪ್ರಭುಗೌಡ ದೇಸಾಯಿ ಅವರಿಗೆ ನಾಮಪತ್ರ ಸಲ್ಲಿಸಲು ಸೂಚಿಸಿದ್ದರು ಎನ್ನಲಾಗಿದೆ. ಆದರೆ ಈ ಸುದ್ದಿಯನ್ನು ತಿಳಿದ ಅವರ ಬೆಂಬಲಿಗರು ವಿಮಲಾ ಬಾಯಿ ಅವರಿಗೆ ಜೆ.ಡಿ.ಎಸ್.ಟಿಕೆಟ್ ಕೊಡ ಬೇಕೆಂದು ಗ್ರಾಮವನ್ನು ಬಂದ್ ಮಾಡಿಸಿದರಲ್ಲದೇ ತಾಲ್ಲೂಕು ಕೇಂದ್ರವಾದ ಮುದ್ದೇಬಿಹಾಳಕ್ಕೆ ದ್ವಿಚಕ್ರ ವಾಹನ ಗಳಲ್ಲಿ ಆಗಮಿಸಿ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.

ಮುದ್ದೇಬಿಹಾಳದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿದ ಕಾರ್ಯಕರ್ತರು ಜೆ.ಡಿ.ಎಸ್.ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನ ಗೌಡ ಪಾಟೀಲ ತಮ್ಮ ಮುಖಂಡರಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಅವರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಗಿರೀಶಗೌಡ ಪಾಟೀಲ, ವೀರೇಶ ಗಂಗನಗೌಡ್ರ, ಸಂಗಣ್ಣ ಹಡಲಗೇರಿ, ಅಮರೇಶ ಗಂಗನಗೌಡ್ರ, ವೀರೇಶ ಮಳ್ಳೆತ್ತಿ, ನಿಂಗಣ್ಣ ರಾಮೋಡಗಿ, ವೀರೇಶ ಬಾವಿಕಟ್ಟಿ, ಬಸು ಗಡ್ಡಿ, ಅಮರೇಶ ಮಳ್ಳೆತ್ತಿ, ಧೂಳಪ್ಪ ಟಕ್ಕಳಕಿ, ಈರಪ್ಪ ಟಕ್ಕಳಕಿ, ಸುರೇಶ ಹೊಳಿ, ವೀರೇಶ ಬಲದಿನ್ನಿ, ಬಸವರಾಜ ಅಂಗಡಿ ಸೇರಿದಂತೆ ಪಟ್ಟಣದ ಹಾಗೂ ತಾಳಿಕೋಟಿ, ಮಿಣಜಗಿ, ನಾಲತವಾಡ, ಹಿರೇಮುರಾಳದ  ಅಭಿಮಾನಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.