ದೇವರ ಹಿಪ್ಪರಗಿ: ‘ದೇಶೀಯ ಕ್ರೀಡೆಗಳ ಮೂಲಕ ಭಾರತದ ಗ್ರಾಮ ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಅಳಿವಿನ ಅಂಚಿನಲ್ಲಿರುವ ದೇಶೀಯ ಆಟಗಳನ್ನು ಯುವಕರು ನಿರ್ಲಕ್ಷಿಸಬಾರದು’ ಎಂದು ಸದಯ್ಯನಮಠದ ವೀರಗಂಗಾಧರ ಶ್ರೀ ಪ್ರತಿಪಾದಿಸಿದರು.
ಪಟ್ಟಣದ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನವ ನಿರ್ಮಾಣ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಗ್ರಾಮೀಣ ಕ್ರೀಡಾ ಉತ್ಸವದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳತ್ತ ಯುವ ಜನತೆ ಗಮನ ನೀಡಿ ಅವುಗಳನ್ನು ಉಳಿಸುವ ಕಾರ್ಯ ಮಾಡಬೇಕು’ ಎಂದೂ ಸಲಹೆ ನೀಡಿದರು.
ದೈಹಿಕ ಶಿಕ್ಷಣ ಶಿಕ್ಷಕ ಬಿ.ಬಿ.ಪಾಟೀಲ ಮಾತನಾಡಿ, ‘ಯುವ ಸಬಲೀಕರಣ ಇಲಾಖೆ ಯುವಕರಿಗಾಗಿ ಸಾಕಷ್ಟು ಯೋಜನೆ ಹಾಕಿಕೊಂಡಿದೆ ಅವುಗಳ ಸದುಪಯೋಗ ಪಡಿಸಿಕೊಳ್ಳಲು ಯುವಕರು ಮುಂದಾಗಬೇಕೆಂದು’ ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ‘ಗ್ರಾಮೀಣ ಕ್ರೀಡೆಗಳು ನಮ್ಮ ಪೂರ್ವಜರ ಕಲ್ಪನೆಯ ಕೂಸುಗಳು. ದೇಶೀಯ ಆಟಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶಾಬಿರಾಬಾನು ಮಳಖೇಡ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯ ಮಹಾದೇವ ನಾಯ್ಕೋಡಿ, ಲಾಲಸಾಬ್ ಮಳಖೇಡ ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಎಸ್.ಎನ್.ಪೂಜಾರಿ, ಎ.ಎಸ್.ಪತ್ತಾರ, ಆರ್.ಡಿ.ಗೌಳಿ, ಎಸ್.ಎಚ್.ಗಚ್ಚಿನಕಟ್ಟಿ, ಆರ್.ಡಿ.ಕಾಖಂಡಕಿ, ಎಸ್.ಆರ್.ಕರಾಳೆ, ಆರ್.ಬಿ.ಹಡಪದ, ಕಾರ್ಯ ನಿರ್ವಹಿಸಿದರು.
ಸಂಘದ ಅಧ್ಯಕ್ಷ ನಾನಾಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೇಖರ ಕಾಂಬಳೆ ಸ್ವಾಗತಿಸಿದರು. ಬಸವರಾಜ ಶಿರಣಗಾರ ನಿರೂಪಿಸಿದರು. ರಮೇಶ ಮಾಮನೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.