ಬಾದಾಮಿ: ಭಾನುವಾರ ಸಂಜೆ ಇಲ್ಲಿನ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಎರಡು ಗಂಟೆ ಕಾಲ ಸುರಿದ ಧಾರಾಕಾರ ಮಳೆಯಿಂದ ಅಗಸ್ತ್ಯತೀರ್ಥ (ಭೂತನಾಥ) ಕೆರೆಯ ಪೂರ್ವ ದಿಕ್ಕಿನ ಬಂಡೆಯ ಮೇಲಿಂದ ಜೋಡಿ ಜಲಧಾರೆಗಳು ಧುಮ್ಮಿಕ್ಕಿದ ನೋಟ ನಯನ ಮನೋಹರವಾಗಿತ್ತು.
ವಿಶಾಲವಾದ ಅಗಸ್ತ್ಯತೀರ್ಥ ಕೆರೆಯಲ್ಲಿ ಮಳೆ ಯಿಂದಾಗಿ ಒಂದು ಅಡಿಯಷ್ಟು ನೀರು ಸಂಗ್ರಹ ವಾಗಿದೆ.
ಮಳೆಗಾಲ ಆರಂಭವಾದಾಗಿನಿಂದ ಮಳೆಯ ಕೊರತೆಯಿಂದ ಈ ಜೋಡಿ ಜಲಪಾತಗಳು ರಸಿಕರ ಮನದಿಂದ ದೂರವಾಗಿದ್ದವು.
ನೀರು ಧುಮ್ಮಿಕ್ಕದ ಕಾರಣ ಈ ಬಾರಿ ಮಳೆಗಾಲದಲ್ಲಿ ಇಲ್ಲಿನ ಜನತೆ ಹಾಗೂ ಪ್ರವಾಸಿಗರಿಗೆ ಜಲಪಾತವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಭಾನುವಾರದ ಮಳೆಯಿಂದ ಜೋಡಿ ಜಲಪಾತದ ನಯನಮನೋಹರ ದೃಶ್ಯ ಮತ್ತೆ ಕಣ್ಣಿಗೆ ಕಟ್ಟಿತು. ಜನರು ಇದನ್ನು ವೀಕ್ಷಿಸಿ ಸಂಭ್ರಮಿಸಿದರು.
ಪಟ್ಟದಕಲ್ಲು, ನಂದಿಕೇಶ್ವರ ಹಾಗೂ ಮಹಾಕೂಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಹಿಂಗಾರು ಬಿತ್ತನೆಗೆ ರೈತರಿಗೆ ಅನುಕೂಲವಾಗಿದೆ. ಆದರೆ ಇನ್ನೂ ಮಳೆಯಾಗಬೇಕು ಎಂಬುದು ರೈತರ ಆಸೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.