ADVERTISEMENT

ನಾಡದೇವಿ ಉತ್ಸವಕ್ಕೆ ವೈಭವದ ಚಾಲನೆ:101 ಕೆ.ಜಿ. ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 4:55 IST
Last Updated 19 ಅಕ್ಟೋಬರ್ 2012, 4:55 IST

ವಿಜಾಪುರ: ನಗರದ ರಾಮ ಮಂದಿರ ರಸ್ತೆಯ ಸಿದ್ಧೇಶ್ವರ ಆದಿಶಕ್ತಿ ತರುಣ ಮಂಡಳಿ ವತಿಯಿಂದ ದಸರಾ ಉತ್ಸವದ ಅಂಗವಾಗಿ ನಾಡದೇವಿ ಮೂರ್ತಿ ಪ್ರತಿಷ್ಠಾಪನೆಯ ನಿಮಿತ್ತ ಗುರುವಾರ ಹಮ್ಮಿಕೊಂಡ ನಾಡದೇವಿಯ ಭವ್ಯ ಮೆರವಣಿಗೆಯು ಸಕಲ ವಾದ್ಯ, ವೈಭವದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಇಲ್ಲಿನ ರಾಮ ಮಂದಿರದಿಂದ ಪ್ರಾರಂಭವಾದ 101 ಕೆ.ಜಿ. ತೂಕದ ಬೆಳ್ಳಿಯಿಂದ ತಯಾರಿಸಿದ ನಾಡದೇವಿ ಮೂರ್ತಿಯ ಮೆರವಣಿಗೆಯು ಎಸ್.ಎಸ್. ರೋಡ, ಗಣಪತಿ ಚೌಕ ಗಾಂಧಿ ವೃತ್ತ ಸರಾಫ್ ಬಜಾರ್ ಸೇರಿದಂತೆ ವಿವಿದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಬ್ಬದ ಕಳೆ ಕಟ್ಟಿತು.

ಈ ಮೆರವಣಿಗೆಯಲ್ಲಿ ಸೋಲಾಪುರದ ಲೇಜಿಮ್, ಕೊಲ್ಲಾಪುರದ ಬ್ಯಾಂಜಿಯೋ, ಸಾಗರ ಹಾಗೂ ನಾಸಿಕ್‌ದ ಢೋಲ್, ಇದಲ್ಲದೆ ಕರಡಿ ಮಜಲ್, ಡೊಳ್ಳು ಕುಣಿತ ತಂಡದವರು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದರೆ, ಹಲವು ಭಕ್ತರು ಅಂಬಾಭವಾನಿ ಕೀ ಜೈ, ತುಳಜಾ ಭವಾನಿ ಕೀ ಜೈ ಎಂದು ಮೆರವಣಿಗೆಯುದ್ದಕ್ಕೂ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ವಿಶೇಷವಾಗಿ ಈ ಬಾರಿ ಉತ್ಸವದದಲ್ಲಿ ಬೃಹತ್ ಗಾತ್ರದ ಹನುಮಂತನು ತನ್ನ ಆರಾಧ್ಯ ದೇವ ಶ್ರೀರಾಮಚಂದ್ರನನ್ನು ಸ್ಮರಿಸಿ ಭಕ್ತಿಯಿಂದ ಭಜನೆ ಮಾಡುತ್ತಿರುವ ರೂಪಕ ನೋಡುಗರ ಗಮನ ಸೆಳೆಯಿತು.
ಸಿದ್ಧೇಶ್ವರ ಆದಿಶಕ್ತಿ ತರುಣ ಮಂಡಳಿಯ ಅಧ್ಯಕ್ಷ ಶ್ರೀಶೈಲ ಗಚ್ಚಿನಮಠ ಅವರ ನೇತೃತ್ವದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಮಾಜಿ ಸಂಸದ ಬಸನಗೌಡ ಪಾಟೀಲ ಯತ್ನಾಳ, ಗುರು ಗಚ್ಚಿನಮಠ, ರಾಘು ಅಣ್ಣಿಗೇರಿ, ವಿವೇಕ ಹರಿಕಾರ, ಪುಟ್ಟುಗೌಡ ಪಾಟೀಲ, ರವಿ ಬಾಗಲಕೋಟ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಉತ್ಸವದ ಅಂಗವಾಗಿ ಯುವಕರಿಗಾಗಿ ರಂಗೋಲಿ ಸ್ಪರ್ಧೆ, ಮನರಂಜನೆ ಹಾಗೂ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.