ADVERTISEMENT

ನಾನು ಗೆದ್ದಿದ್ದರೆ ಸಿ.ಎಂ. ಆಗುತ್ತಿದ್ದೆ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 4:50 IST
Last Updated 3 ಮಾರ್ಚ್ 2012, 4:50 IST

ವಿಜಾಪುರ: `ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿದ್ದರೆ ಯಡಿಯೂರಪ್ಪ ನಂತರ ಸದಾನಂದಗೌಡರ ಬದಲಾಗಿ ನಾನೇ ಈ ರಾಜ್ಯದ ಮುಖ್ಯಮಂತ್ರಿ ಆಗುತ್ತಿದ್ದೆ~ ಎಂದು ಕೇಂದ್ರದ ಮಾಜಿ ಸಚಿವ, ಜೆಡಿಎಸ್ ರಾಜ್ಯ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜೆಡಿಎಸ್ ರಾಜ್ಯ ಯುವ ಘಟಕದಿಂದ `ನವಶಕ್ತಿ ಸಂಚಲನ- ದಾವಣಗೆರೆಯಲ್ಲಿ ಮಿಲನ~ದ ಅಂಗವಾಗಿ ಗುರುವಾರ ಸಂಜೆ ಇಲ್ಲಿ ಏರ್ಪಡಿಸಿದ್ದ ಯುವ ಚೇತನ ಸಮಾವೇಶದಲ್ಲಿ ಮಾತನಾಡಿದರು.

`ಕಾಂಗ್ರೆಸ್‌ನವರು ಪಕ್ಷಕ್ಕೆ ಬರುವಂತೆ ನನಗೆ ಆಹ್ವಾನ ನೀಡುತ್ತಿದ್ದಾರೆ. ನಾನು ಜೆಡಿಎಸ್ ತೊರೆಯುವುದಿಲ್ಲ. ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಗುರಿ. ನಿತೀಶ್‌ಕುಮಾರ, ನರೇಂದ್ರ ಮೋದಿ ಅವರನ್ನು ಮರೆಸುವಷ್ಟು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿದ್ದಾರೆ~ ಎಂದರು.
`ಮುಂಬರುವ ದಿನಗಳಲ್ಲಿ ಬದಲಾವಣೆಯ ಗಾಳಿ ಬೀಸಲಿದ್ದು, ಚುನಾವಣೆಯಲ್ಲಿ ಶೇ.50 ರಷ್ಟು ಯುವಕರಿಗೆ ಆದ್ಯತೆ ನೀಡಲಾಗುವುದು~ ಎಂದರು.

`ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನಾನು ಸಚಿವನಾಗುತ್ತೇನೆ.ಜಿಲ್ಲೆಯ ಎಂಟೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಜೆ.ಡಿ.ಎಸ್. ಶಾಸಕರನ್ನು ಮತ್ತು ಒಬ್ಬ ಸಂಸದರನ್ನು ಆಯ್ಕೆ ಮಾಡಿದರೆ ಈ ಜಿಲ್ಲೆಯನ್ನು ರಾಜ್ಯದ ನಂ.1 ಅಭಿವೃದ್ಧಿ ಜಿಲ್ಲೆಯನ್ನಾಗಿ ಮಾಡುತ್ತೇನೆ. ಇಲ್ಲವಾದರೆ ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತೇನೆ~ ಎಂದು ಹೇಳಿದರು.

`ದಿ.ಎಸ್.ಬಂಗಾರಪ್ಪ ಅವರ ಕುಡಿ ಇನ್ನೂ ಬೆಳೆಯಬೇಕಿದೆ. ಮಧು ಬಂಗಾರಪ್ಪ ನಮ್ಮ ಸಹೋದರರಿದ್ದಂತೆ. ಬಂಗಾರಪ್ಪ ಅವರಿಗೆ ನೀಡಿದ ಪ್ರೀತಿ-ವಾತ್ಸಲ್ಯವನ್ನು ಮಧು ಅವರಿಗೂ ನೀಡಬೇಕು~ ಎಂದು ಜನತೆಗೆ ಮನವಿ ಮಾಡಿದರು.

`ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದವರು ಆರ್.ಎಸ್.ಎಸ್. ನವರು, ಆ ಸ್ಥಳದಲ್ಲಿ ಅಲ್ಪಸಂಖ್ಯಾತರು ಪಾಕ್ ಧ್ವಜ ಹಾರಿಸಿದ್ರೆ ಅವರು ಸುಮ್ಮನೆ ಕೂಡುತ್ತಿದ್ದರಾ~ ಎಂದು ಪ್ರಶ್ನಿಸಿದರು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮನಗೂಳಿ, ಮಾಜಿ ಶಾಸಕ ಆರ್.ಕೆ. ರಾಠೋಡ, ಪದಾಧಿಕಾರಿಗಳಾದ ಪ್ರಭು ದೇಸಾಯಿ, ಶ್ರೀನಿವಾಸ್, ಚಂದ್ರಶೇಖರ, ಸಂಗಣ್ಣ ಕರಡಿ, ಗುರು ಗಚ್ಚಿನಮಠ, ಅಪ್ಪುಗೌಡ ಪಾಟೀಲ, ಸಂಗಮೇಶ ಬಬಲೇಶ್ವರ, ರೇಷ್ಮಾ ಪಡೇಕನೂರ, ಶ್ರೀಪತಿಗೌಡ ಪಾಟೀಲ, ರಾಜಪಾಲ ಚವ್ಹಾಣ ಇತರರು ವೇದಿಕೆಯಲ್ಲಿದ್ದರು. ಚಂದ್ರಕಾಂತ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.ಕಾಂಗ್ರೆಸ್ ಮತ್ತು ಬಿಜೆಪಿಯ ಹಲವು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾದರು.

ವಾರ್ಷಿಕೋತ್ಸವ ಇಂದು
ತಾಳಿಕೋಟೆ:
ಸ್ಥಳೀಯ ಬಾಲಭಾರತಿ ವಿದ್ಯಾಮಂದಿರದ  ವಾರ್ಷಿಕೋತ್ಸವ ಸಮಾರಂಭವು ಇದೇ 3ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.

ಅಧ್ಯಕ್ಷತೆಯನ್ನು ವಿದ್ಯಾಭಾರತಿ ಪ್ರೌಢಶಾಲೆ ಅಧ್ಯಕ್ಷ ಸುಬ್ಬಯ್ಯ ಹೆಬಸೂರ ವಹಿಸುವರು. ಅತಿಥಿಗಳಾಗಿ ಮಿಣಜಗಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅಶೋಕ ಹಂಚಲಿ ಆಗಮಿಸಲಿದ್ದಾರೆ.

4ರಂದು ಏಳನೆ ವರ್ಗದ ಹಾಗೂ 10ನೇ ವರ್ಗದ ಬೀಳ್ಕೊಡುಗೆ ಸಮಾರಂಭ ಸಂಜೆ 4ಕ್ಕೆ ಜರುಗಲಿದೆ. ಅಧ್ಯಕ್ಷತೆಯನ್ನು ಬಾಲಭಾರತಿ ವಿದ್ಯಾಮಂದಿರದ ಅಧ್ಯಕ್ಷ ವಿಠ್ಠಲಸಿಂಗ್ ಹಜೇರಿ ವಹಿಸುವರು.

ವಿದ್ಯಾಭಾರತಿ ಶಿವಮೊಗ್ಗ ವಿಭಾಗದ ಪ್ರಮುಖ ಕೆ.ಎಂ. ಜಯಶೀಲ ಹಾಗೂ ಮುದ್ದೇಬಿಹಾಳದ ಶಿಕ್ಷಣ ಸಂಯೋಜಕ ಎಸ್.ಎಸ್. ಗಡೇದ ಭಾಗವಹಿಸಲಿ ದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.