ADVERTISEMENT

ನಿಸ್ವಾರ್ಥ ಸೇವೆಗೆ ಪ್ರತಿಫಲ ಖಚಿತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 3:20 IST
Last Updated 19 ಮಾರ್ಚ್ 2012, 3:20 IST

ವಿಜಾಪುರ: `ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಋಣ ತೀರಿಸಿದರೆ ದೇವರು ಅದರ ಪ್ರತಿಫಲವನ್ನು ನಮಗೆ ಕೊಟ್ಟೇ ಕೊಡುತ್ತಾನೆ~ ಎಂದು ಅಲ್-ಅಮೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಿಯಾವುಲ್ಲಾ ಷರೀಫ್ ಹೇಳಿದರು.
ಇಲ್ಲಿಯ ಅಲ್-ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ರಾತ್ರಿ ನಡೆದ ಕಾಲೇಜಿನ 2006ನೇ ಬ್ಯಾಚ್‌ನ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

`ಅಲ್-ಅಮೀನ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಕಳೆದ ವರ್ಷ 25ನೇ ವರ್ಷಕ್ಕೆ ಕಾಲಿಟ್ಟಿತ್ತು. ಆ ಸಮಾರಂಭ ಮಾಡುವುದನ್ನು ಬಿಟ್ಟು, ಆ ಖರ್ಚಿನಲ್ಲಿ ಬಡವರಿಗಾಗಿ 200 ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಸಂಬಂಧಿಸಿದವರಿಗೆ ಶೀಘ್ರವೇ ಹಸ್ತಾಂತರಿಸಲಾಗುವುದು~ ಎಂದರು.

`ಅಲ್-ಅಮೀನ್ ವೈದ್ಯಕೀಯ ಆಸ್ಪತ್ರೆ ಮಾನವೀಯ ಸೇವೆ ಸಲ್ಲಿಸುತ್ತಿದೆ. ಸಿಂದಗಿ ತಾಲ್ಲೂಕು ಕಲಕೇರಿಯಲ್ಲಿ ಬೆಂಕಿ ಅನಾಹುತದಲ್ಲಿ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥರಾಗಿರುವ ಇಬ್ಬರು ಸಹೋದರಿಯರಿಗೆ ಉಚಿತ ಆರೈಕೆ ಮಾಡುವ ಮೂಲಕ ನಮ್ಮ ಆಸ್ಪತ್ರೆಯವರು ಮಾನವೀಯತೆ ಮೆರೆದಿದ್ದಾರೆ. ಈ ಬಾಲೆಯರ ವಿದ್ಯಾಭ್ಯಾಸ ಹಾಗೂ ಪುನರ್ವಸತಿಗೆ ಅಗತ್ಯ ನೆರವು ನೀಡಲು ನಿರ್ಧರಿಸಿದ್ದೇವೆ~ ಎಂದು ಹೇಳಿದರು.

`ನಮ್ಮ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್‌ನಲ್ಲಿ ಅಧ್ಯಯನ ಮಾಡುತ್ತಿರುವ ಒಬ್ಬ ವಿದ್ಯಾರ್ಥಿ ಬಂದು ತಮಗೆ ಶಿಷ್ಯವೇತನ ನೀಡುವಂತೆ ಕೋರಿದ. ಸ್ಥಿತಿವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೊಡುವುದು ಅಷ್ಟೊಂದು ಸೂಕ್ತವಲ್ಲ. ಅದರ ಬದಲಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆ ಹಾಗೂ ಅವರು ಬಡವರಿಗೆ ಸೇವೆ ಸಲ್ಲಿಸಲಿಕ್ಕಾಗಿ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ನೀಡಲು ನಿರ್ಧರಿಸಲಾಗಿದೆ~ ಎಂದು ತಿಳಿಸಿದರು.

`ಸಂಸ್ಥೆಯ ವೈದ್ಯರು, ಸಿಬ್ಬಂದಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಒಬ್ಬ ಸಿಬ್ಬಂದಿಗೆ ಅತ್ಯುತ್ತಮ ಸಿಬ್ಬಂದಿ ಎಂದು ಗುರುತಿಸಿ ಐದು ಸಾವಿರ ರೂಪಾಯಿ ಬಹುಮಾನ ನೀಡುವುದನ್ನು ಈ ವರ್ಷದಿಂದ ಆರಂಭಿಸಿದ್ದೇವೆ~ ಎಂದು ಜೀಯಾವುಲ್ಲಾ ಷರೀಫ್ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮೀನಾ ಚಂದಾವರಕರ, `ವೈದ್ಯಕೀಯ, ನರ್ಸಿಂಗ್ ಹಾಗೂ ಶಿಕ್ಷಣ ಈ ಮೂರು ಪ್ರಮುಖ ವೃತ್ತಿಗಳಾಗಿವೆ. ಎಂಬಿಬಿಎಸ್ ಪದವಿ ಪಡೆದಿರುವ ನೀವು ಉತ್ತಮ ವೈದ್ಯರಾಗಿ ಹೆಸರು ಮಾಡಬೇಕು. ಕಲಿಕೆಗೆ ಕೊನೆ ಎಂಬುದಿಲ್ಲ. ಸಂಶೋಧನೆ, ಕಲಿಕೆ ನಿರಂತರವಾಗಿರಬೇಕು~ ಎಂದರು.

`ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕೇವಲ ಶೇ.8ರಿಂದ 10ರಷ್ಟಿದೆ.  ಬ್ರೀಟಿಷರ ಕಾಲದಿಂದಲೂ ನಮ್ಮ ದೇಶದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುತ್ತಿದೆ. ಎಲ್ಲರೂ ಉನ್ನತ ಶಿಕ್ಷಣ ಪಡೆದು ಮಾಜಿ ರಾಷ್ಟ್ರಪತಿ ಡಾ.ಕಲಾಂ ಅವರ ಕನಸಿನ ಭಾರತವನ್ನು ನಿರ್ಮಿಸಬೇಕು~ ಎಂದು ಕರೆ ನೀಡಿದರು.

ಎಂ.ಬಿ.ಬಿ.ಎಸ್. ಪದವಿ ಪೂರೈಸಿದ ವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಕಾಲೇಜಿ ಡೀನ್ ಡಾ.ಬಿ.ಎಸ್. ಪಾಟೀಲ, `ಜಾತಿ ಹಾಗೂ ಪ್ರಾದೇಶಿಕತೆಯ ಗಡಿ ಮೀರಿ ಸೇವೆ ಸಲ್ಲಿಸಿ ಗುರಿ ತಲುಪಬೇಕು. ಸೇವಾ ಮನೋಭಾವವೇ ನಮ್ಮೆಲ್ಲರ ಗುರಿಯಾಗಿರಬೇಕು. ವೈದ್ಯ ವೃತ್ತಿಗೆ ನ್ಯಾಯ ದೊರಕಿಸಿಕೊಡಬೇಕು~ ಎಂದು ಕಿವಿ ಮಾತು ಹೇಳಿದರು.

ಅಲ್-ಅಮೀನ್ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹ್ಮದ ಅಲಿ ಖಾನ್, ಧರ್ಮದರ್ಶಿ ರಿಯಾಜ್ ಫಾರೂಕಿ, ವೈದ್ಯಕೀಯ ಕಾಲೇಜಿನ ಉಪ ಪ್ರಾಚಾರ್ಯ ಡಾ.ಸಲೀಂ ಧುಂಡಸಿ, ಡೆಂಟಲ್ ಕಾಲೇಜಿನ ಉಪ ಪ್ರಾಚಾರ್ಯ ಡಾ.ಸತೀಶ ಶಹಾಪೂರ, ಅಧೀಕ್ಷಕ ಡಾ.ರಾಶಿನಕರ, ಉಪ ಅಧೀಕ್ಷಕಿ ಡಾ.ವಿದ್ಯಾ ಥೊಬ್ಬಿ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.