ADVERTISEMENT

ನೀರು ಹಂಚಿಕೆ: ಅನ್ಯಾಯವಾದರೆ ಹೋರಾಟ–ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 10:51 IST
Last Updated 3 ಅಕ್ಟೋಬರ್ 2017, 10:51 IST

ಆಲಮಟ್ಟಿ(ನಿಡಗುಂದಿ): ‘ಆಲಮಟ್ಟಿ ಜಲಾಶಯವನ್ನು 524.256 ಮೀ. ಏರಿಕೆ ಮಾಡಿದರೆ ವಿಜಯಪುರ ಜಿಲ್ಲೆಯ ಹೆಚ್ಚಿನ ಜಮೀನುಗಳೇ ಮತ್ತೆ ಮುಳುಗುತ್ತವೆ. ಅದಕ್ಕಾಗಿ ಜಲಾಶಯದಲ್ಲಿ ಸಂಗ್ರಹವಾದ ನೀರಿನಲ್ಲಿ ಮೊದಲ ಆದ್ಯತೆ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ನೀಡಬೇಕು. ಜಿಲ್ಲೆಯ ನೀರಾವರಿ ವಿಷಯದಲ್ಲಿ ಅನ್ಯಾಯವಾದರೆ ಸಂಘಟಿತ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಕಲ್ಲು ಸೊನ್ನದ ಹಾಗೂ ಬಸವನಬಾಗೇವಾಡಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಎಚ್ಚರಿಸಿದರು.

ಆಲಮಟ್ಟಿಯಲ್ಲಿ ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಜೊತೆಗೂಡಿ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

‘ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಕೃಷ್ಣೆಗೂ ಮುಂಬರುವ ದಿನಗಳಲ್ಲಿ ಕಾನೂನಾತ್ಮಕವಾಗಿ ಯಾವುದೇ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಈಗಲೇ ಎಚ್ಚರಿಕೆಯ ಹೆಜ್ಜೆ ಇಡಬೇಕು. ಕೃಷ್ಣೆ ಹಾಗೂ ಇಲ್ಲಿನ ರೈತರಿಗೆ ಅನ್ಯಾಯವಾದರೆ ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ADVERTISEMENT

ಎಸ್‌.ಎಸ್. ಅರಮನಿ, ಮಂಜುನಾಥ ಹಿರೇಮಠ ಮಾತನಾಡಿ ದರು. ಇದಕ್ಕೂ ಮೊದಲು ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದ ಆವರಣದಿಂದ ಕನ್ನಡ ಮಾತೆಗೆ ಹಾಗೂ ಕೃಷ್ಣೆಗೆ ಜಯಘೋಷ ಹಾಕುತ್ತಾ ನೂರಾರು ಕರವೇ ಕಾರ್ಯಕರ್ತರು ಮೆರವಣಿಗೆಯ ಮೂಲಕ ಚಂದ್ರಮ್ಮ ದೇವಸ್ಥಾನದ ಬಳಿ ಕೃಷ್ಣಾ ನದಿಗೆ ತೆರಳಿ, ಅಲ್ಲಿ ಬಾಗಿನ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.