ವಿಜಾಪುರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಿಸುವ ಸಿದ್ಧತೆಯಲ್ಲಿ ತೊಡಗಿದ್ದ ಡಿಂಡವಾರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವಿ.ಕೆ. ಹಿರೇಮಠ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ಎಸ್.ವೈ. ಹಳಿಂಗಳಿ ತಿಳಿಸಿದ್ದಾರೆ.
ದಿಂಡವಾರ ಪ್ರೌಢ ಶಾಲೆಯ ಗುತ್ತಿಗೆ ಶಿಕ್ಷಕಿ ವಿ.ಬಿ. ಪಾಟೀಲ ಅವರನ್ನು ಸೇವೆಯಿಂದ ವಜಾ ಮಾಡುವಂತೆ ಸಂಬಂಧಿಸಿದ ಗುತ್ತಿಗೆ ಸಂಸ್ಥೆಗೆ ನಿರ್ದೇಶನ ನೀಡಿದ್ದು, ಈ ಅಕ್ರಮಕ್ಕೆ ಸಹಕಾರ ನೀಡಲು ಯತ್ನಿಸುತ್ತಿದ್ದ ಖಾಸಗಿ ಶಾಲೆಯ ಇಬ್ಬರು ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಹೂವಿನ ಹಿಪ್ಪರಗಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಆರ್.ಎಸ್. ತುಂಗಳ ಅವರನ್ನು ಪರೀಕ್ಷಾ ಸೇವೆಯಿಂದ ಅಮಾನತುಗೊಳಿಸಿದ್ದು, ಬೇರೊಬ್ಬರನ್ನು ನಿಯೋಜಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಹೂವಿನ ಹಿಪ್ಪರಗಿ ಪರೀಕ್ಷಾ ಕೇಂದ್ರಕ್ಕೆ ಬುಧವಾರ ತಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಸಂಗತಿ ಬೆಳಕಿಗೆ ಬಂತು. ಈ ಶಿಕ್ಷಕರು ಹಾಗೂ ಸಿಬ್ಬಂದಿಗೆ ಪರೀಕ್ಷಾ ಸೇವೆ ಇರಲಿಲ್ಲ. ಆದರೂ, ಅವರು ಆ ಕೇಂದ್ರದ ಖಾಲಿ ಕೊಠಡಿಯೊಂದರದಲ್ಲಿ ಕುಳಿತು ವಿದ್ಯಾರ್ಥಿಗಳಿಗೆ ನಕಲು ಮಾಡಿಸುವ ಪೂರ್ವತ ಯಾರಿಯಲ್ಲಿ ತೊಡಗಿದ್ದರು ಎಂದು ಡಿಡಿಪಿಐ ಹೇಳಿದ್ದಾರೆ.
1135 ಮಕ್ಕಳು ಗೈರು: ಬುಧವಾರ ನಡೆದ ಎಸ್ಎಸ್ಎಲ್ಸಿಯ ವಿಜ್ಞಾನ ವಿಷಯ ಪರೀಕ್ಷೆಗೆ 1135 ಮಕ್ಕಳು ಗೈರು ಉಳಿದಿದ್ದರು.28,893 ಮಕ್ಕಳು ನೋಂದಾಯಿಸಿಕೊಂಡಿದ್ದರು. ಅವರಲ್ಲಿ 27,758 ಮಕ್ಕಳು ಮಾತ್ರ ಪರೀಕ್ಷೆ ಬರೆದರು ಎಂದು ನೋಡಲ್ ಅಧಿಕಾರಿ ನಾಗೇಂದ್ರ ಸಿನ್ನೂರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.