ADVERTISEMENT

ಬಡವರ ಉದ್ಧಾರಕ್ಕೆ ನೆರವಾಗಿ: ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:05 IST
Last Updated 7 ಫೆಬ್ರುವರಿ 2011, 10:05 IST

ಆಲಮಟ್ಟಿ: ಶ್ರೀಮಂತರು ತಮ್ಮ ಆದಾಯದ ಒಂದು ಭಾಗವನ್ನು ಸಮಾಜದ ಬಡವರ ಉದ್ಧಾರಕ್ಕಾಗಿ ಮೀಸಲಿಟ್ಟು ಸೇವೆ ಸಲ್ಲಿಸಬೇಕು. ಇದರಿಂದ ಬಡ ಪ್ರತಿಭಾವಂತ ಮಕ್ಕಳ ಭವಿಷ್ಯಕ್ಕೆ ನೆರವಾಗುವುದು ಎಂದು ಮಾಜಿ ಶಾಸಕ ಶಿವಾನಂದ ಪಾಟೀಲ ಹೇಳಿದರು.ಅವರು ನಿಡಗುಂದಿಯ ಬನಶಂಕರಿ ದೇವಸ್ಥಾನದಲ್ಲಿ ಇತ್ತೀಚೆಗೆ ದೇವಾಂಗ ನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಶತಾಯುಷಿಗಳಿಗೆ ಕನಕಾಭಿಷೇಕ, ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ದೇವಾಂಗ ಸಮಾಜದವರು ಅಲ್ಪಸಂಖ್ಯಾತರಾಗಿದ್ದರೂ ಅವರ ಕಾರ್ಯ ಸಮಾಜಕ್ಕೆ ಮಾದರಿ ಎಂದರು.

ಜೆ.ಡಿ.ಎಸ್. ಧುರೀಣ ಅಪ್ಪುಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಕವಾಗಿದ್ದು, ಸಮಾಜದ ವಿದ್ಯಾರ್ಥಿಗಳು ಇಲ್ಲಿ ದೊರೆತಿರುವ ಪ್ರೋತ್ಸಾಹದಿಂದ ಉನ್ನತ ದರ್ಜೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವಂತೆ ಸಲಹೆ ನೀಡಿದರು.ಜಿ.ಪಂ. ಸದಸ್ಯ ಶಿವಾನಂದ ಅವಟಿ, ಬಸವರಾಜ ನಾಲತವಾಡ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಗರಾಜ ದೇಸಾಯಿ, ಹಾಸನ ಪ್ರೆಸಿಡೆನ್ಸಿ ಕಾಲೇಜಿನ ಉಪನ್ಯಾಸಕ ಗೋಪಾಲ ಮಾತನಾಡಿದರು. ನಿಡಗುಂದಿಯ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಅಧ್ಯಕ್ಷತೆಯನ್ನು ಸೂರ್ಯಕಾಂತ ಅಂಕದ ವಹಿಸಿದ್ದರು. ಅತಿಥಿಗಳಾಗಿ ತಾ.ಪಂ. ಸದಸ್ಯೆ ನೀಲಮ್ಮ ದೊಡಮನಿ, ಗ್ರಾ.ಪಂ. ಅಧ್ಯಕ್ಷ ಶಿವಾನಂದ ಮುಚ್ಚಂಡಿ, ಸಮಾಜದ ಜಿಲ್ಲಾಧ್ಯಕ್ಷ ಹೊನ್ನಪ್ಪ ಗುಳೇದಗುಡ್ಡ, ಪುಂಡಲೀಕಪ್ಪ ಗೌಡರ, ಬಸವರಾಜ ಗೌಡರ, ಶಂಕ್ರಪ್ಪ ಹಳೆಮನಿ, ಕರವೀರಪ್ಪ ಕುಪ್ಪಸ್ತ, ಶಂಕ್ರಪ್ಪ ಕರ್ನಾಳ ಆಗಮಿಸಿದ್ದರು.ಸಮಾಜದ ಹಿರಿಯರಾದ ಬಸಪ್ಪ ಪರಪ್ಪ ಕುಪ್ಪಸ್ತ, ಷಣ್ಮುಖವ್ವ ಶಂಕ್ರಪ್ಪ ಅಂಕದ ಅವರಿಗೆ ಕನಕಾಭಿಷೇಕ ಮಾಡಲಾಯಿತು.

ನಿಂಗಪ್ಪ ಮುಳವಾಡ, ಪತ್ರಕರ್ತ ಶಂಕರ ಹೆಬ್ಬಾಳ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಕೊಳಗದ ಗುರುಮೂರ್ತಿ, ವಿ.ವೈ. ಅಂಕದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಗೋಡಿಹಾಳ ಸ್ವಾಗತಿಸಿದರು. ಲಕ್ಷ್ಮೀ ನಿಂಬರಗಿ ಮತ್ತು ಎನ್.ಎಮ್. ಬಸರಕೋಡ ನಿರೂಪಿಸಿದರು. ಸಂಗಮೇಶ ರೂಡಗಿ ವಂದಿಸಿದರು.ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಹಾಗೂ ಪದವಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅರನೇ ವೇತನ ಜಾರಿಗಾಗಿ ಒತ್ತಾಯ
ಇಂಡಿ: ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯ ಸರಕಾರಿ ನೌಕರರಿಗೆ ಆರನೇ ವೇತನ ಆಯೋಗದ, ವೇತನ ಹಾಗೂ ಭತ್ಯೆಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ತಾಲ್ಲೂಕು ಸರಕಾರಿ ನೌಕರರ ಸಂಘ ಒತ್ತಾಯಿಸಿದೆ.ರಾಜ್ಯ ಸರ್ಕಾರವೂ ವೇತನದ ಜೊತೆಗೆ ಮನೆ ಬಾಡಿಗೆ ಭತ್ಯೆ ಪರಿಷ್ಕರಿಸಬೇಕು. ಸರಕಾರಿ ನೌಕರರ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹಾಗೂ ನೌಕರಿಗಾಗಿ ವರಮಾನದ ಮಿತಿಯನ್ನು ಕೇಂದ್ರ ಸರಕಾರದ ಮಾದರಿಯಲ್ಲಿ ಹೆಚ್ಚಿಸಿ ಕೂಡಲೇ ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದರು.ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ಫೆ. 9ರಂದು ಮಧ್ಯಾಹ್ನ ತಹಸೀಲ್ದಾರ ಕಚೇರಿ ಮುಂದೆ ಸಾಂಕೇತಿಕ ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದುಸಂಘದ ಅಧ್ಯಕ್ಷ ಬಿ.ಕೆ.ಗೋಟ್ಯಾಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.