ADVERTISEMENT

ಬ.ಬಾಗೇವಾಡಿ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 9:05 IST
Last Updated 21 ಜನವರಿ 2011, 9:05 IST

ಬಸವನಬಾಗೇವಾಡಿ: ಕನ್ನಡ ನಾಡಿಗೆ ಬಸವನಬಾಗೇವಾಡಿ ತಾಲ್ಲೂಕಿನ ಕೊಡುಗೆ ಅಪಾರವಾಗಿದ್ದು  ಅದನ್ನು ಜನತೆಗೆ ಮುಟ್ಟಿಸುವುದು ಅವಶ್ಯವಾಗಿದೆ ಎಂದು ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ  ಪಂಚಾಕ್ಷರಿ ಹಿರೇಮಠ ಹೇಳಿದರು.ಅವರು ಇತ್ತೀಚೆಗೆ ಬಸವೇಶ್ವರ ದೇವಾಲಯ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ  ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಬಸವನಬಾಗೇವಾಡಿ ತಾಲ್ಲೂಕಿನ ಕೊಡುಗೆ ಕುರಿತು’  ಸ್ಥಳೀಯ ಅಕ್ಕನಾಗಮ್ಮ ಬಾಲಕಿಯರ ಕಿರಿಯ ಮಹಾವಿದ್ಯಾಲಯದಲ್ಲಿ ಮಾತನಾಡಿದ ಅವರು, ‘ಇಡೀ ಜಗತ್ತೇ ಬೆರಗಾಗುವಂತೆ ಮಾಡಿದ ಬಸವಣ್ಣನವರು ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿದ್ದಾರೆ’ ಎಂದರು.

ಸಾಸನೂರ ಗ್ರಾಮದ ವಿಜಯ ಸಾಸನೂರ ಅವರು ಕಾದಂಬರಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನುಪಮ ಎಂದು ಹೇಳಿದರು. ತಾಲ್ಲೂಕಿನ ಅನೇಕ ಮಹಾಪುರುಷರು ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದ ಅವರು ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪ ಪ್ರಮುಖ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದರು.ಅವರ ಪ್ರೇರಣೆ ನಮಗೆ ಮಾರ್ಗದರ್ಶನವಾಗಬೇಕೆಂದು ಅಭಿಪ್ರಾಯಪಟ್ಟರು.

ವಚನಕಾರರು ಹಾಗೂ ಶರಣ ಸಾಹಿತ್ಯದ ಕುರಿತು ಮಿಣಜಗಿಯ ಅಶೋಕ ಹಂಚಲಿ ಮಾತನಾಡಿ, ಶರಣರ ಆದರ್ಶಗಳಿಗೆ ಹಾಗೂ ತತ್ವಗಳಿಗೆ ಮನಸೋತ ಸಾವಿರಾರು ಶರಣರು 12 ನೇ ಶತಮಾನದಲ್ಲಿ ಕಲ್ಯಾಣಕ್ಕೆ ಬಂದು ಸೇರಿದ್ದರು ಎಂದು ಹೇಳಿದರು. ಕಾಶ್ಮೀರದ ಅರಸು ಮಹಾದೇವ ಭೋಪಾಲ ರಾಜ್ಯವನ್ನು ತೊರೆದು ಕಲ್ಯಾಣಕ್ಕೆ ಬಂದ ಘಟನೆ ಅವಿಸ್ಮರಣೀಯ ಎಂದು ನುಡಿದರು.

ನುಡಿದಂತೆ ನಡೆದ ಶರಣರ ವಚನಗಳು ನಮಗೆ ದಾರಿದೀಪವಾಗಿವೆ ಎಂದು ಹೇಳಿದರು.  ಅನುಭವ ಮಂಟಪದ ಮುಖಾಂತರ ಸಮಾನತೆ ಸಾರಿದ ಬಸವಾದಿ ಶರಣ ಕ್ರಾಂತಿ ಇಡೀ ಜಗತ್ತಿಗೆ ಇಂದಿಗೂ ಸವಾಲಾಗಿ ನಿಂತಿದೆ ಎಂದರು. ಕಾಲೇಜಿನ ಪ್ರಾಚಾರ್ಯ ಆರ್. ಎಸ್. ಕಟ್ಟೀಮನಿ ಅಧ್ಯಕ್ಷತೆ ವಹಿಸಿದ್ದರು. ಪಿ.ಎಸ್. ಚಿನಿವಾಲರ ಉಪಸ್ಥಿತರಿದ್ದರು.  ಕಸಾಪ ಅಧ್ಯಕ್ಷ ಮಹಾಂತೇಶ ಸಂಗಮ ಸ್ವಾಗತಿಸಿದರು. ಈರಣ್ಣ ಗೊಳಸಂಗಿ ವಂದಿಸಿದರು. ಗಿರಿಜಾ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.