ADVERTISEMENT

ಬಾಲಕಿಯನ್ನು ಥಳಿಸಿದ ವ್ಯಕ್ತಿ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 9:30 IST
Last Updated 3 ಫೆಬ್ರುವರಿ 2012, 9:30 IST

ಸಿಂದಗಿ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ದಲಿತ ಬಾಲಕಿಯನ್ನು ಮರಕ್ಕೆ ಕಟ್ಟಿ ಹಾಕಿ, ಥಳಿಸಿದ ಅಮಾನವೀಯ ಘಟನೆ ತಾಲ್ಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದಲ್ಲಿ ಗುರುವಾರ ನಡೆದಿದೆ.

ನಿರ್ಮಲಾ ಕಂಠೆಪ್ಪ ಮೇಲಿನಮನಿ (15) ಎಂಬ ಬಾಲಕಿ ನಿಂಗಣ್ಣ ಬಿರಾದಾರ ಅವರ ಹೊಲದಲ್ಲಿನ ಬಾಟಿ (ಮೇವು) ಕಿತ್ತುಕೊಂಡ ಕಾರಣಕ್ಕೆ ಈ ಶಿಕ್ಷೆ ನೀಡಲಾಗಿದೆ. ನಿಂಗಣ್ಣನು ಬಾಲಕಿಯನ್ನು ಬಾರಕೋಲಿನಿಂದ ಥಳಿಸಿದ್ದಾನೆ ಎನ್ನಲಾಗಿದೆ.

ಬಾಲಕಿಯನ್ನು ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮರಕ್ಕೆ ಕಟ್ಟಿ ಹಾಕಲಾಗಿತ್ತು. ನಂತರ ಪೊಲೀಸರು ಗ್ರಾಮಕ್ಕೆ ಧಾವಿಸಿ, ಬಾಲಕಿಯನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿ ತಾಯಿ ಮೃತಪಟ್ಟಿದ್ದು, ತಂದೆ ಮಹಾರಾಷ್ಟ್ರದಲ್ಲಿ ಕೂಲಿಗಾಗಿ ಗುಳೆ ಹೋಗಿದ್ದಾನೆ ಎಂದು ತಿಳಿಸಲಾಗಿದೆ.

ಖಂಡನೆ: ಇದೊಂದು ಅನಾಗರಿಕ, ಅಮಾನವೀಯ ಘಟನೆಯಾಗಿದೆ ಎಂದು ದಲಿತ ಮುಖಂಡ ಎಂ.ಎನ್.ಕಿರಣರಾಜ್, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಬೂದಿಹಾಳ ಪಿ.ಎಚ್ ಗ್ರಾಮದ ಲಕ್ಷ್ಮಿ ಮಹಿಳಾ ಸಾಮುಕ್ಯ ಸಂಘದ ಅಧ್ಯಕ್ಷೆ ಶರಣುಬಾಯಿ ಹರಿಜನ, ಉಪಾಧ್ಯಕ್ಷೆ ನೀಲಮ್ಮ ಯಾಳವಾರ, ಇಂದ್ರಾಬಾಯಿ ಗೊಬ್ಬುರ, ದೇವಕ್ಕಿ ಹರಿಜನ, ಚಂದ್ರಮ್ಮ ಯಾಳವಾರ, ಸಾವಿತ್ರಿ ಚಿಕ್ಕಸಿಂದಗಿ ಖಂಡಿಸಿದ್ದಾರೆ. ತಪಿತಸ್ಥನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.