ADVERTISEMENT

ಬೆವರು ಸಂಸ್ಕೃತಿ ಸಾರುವ ದಲಿತ ಸಾಹಿತ್ಯ: ಸಾಣಕರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 9:50 IST
Last Updated 16 ಫೆಬ್ರುವರಿ 2011, 9:50 IST

ಸಿಂದಗಿ: ‘ಜನಾಂಗದ ನೋವು, ಅನ್ಯಾಯ, ಶೋಷಣೆ, ಅವಮಾನ, ದೌರ್ಜನ್ಯ ದಬ್ಬಾಳಿಕೆಗಳ್ನು ಸಹಿಸಿಕೊಂಡ ದಲಿತರ ಬೆವರಿನ ಸಂಸ್ಕ್ರತಿ ದಲಿತ ಸಾಹಿತ್ಯವಾಗಿ ರೂಪುಗೊಂಡಿದೆ’ ಎಂದು ಎ.ಎಂ. ಸಾಣಕರ ಪ್ರತಿಪಾದಿಸಿದರು.

ಅವರು ಪಟ್ಟಣದಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ‘ದಲಿತ ಸಾಹಿತ್ಯ” ಕುರಿತು ಉಪನ್ಯಾಸ ನೀಡಿದರು.‘ಮನುಷ್ಯ ಪ್ರೀತಿ ಬೆಸೆಯುವ ಮಾನವೀಯ ಸಂಬಂಧ ರೂಪಿಸುವ ಹಂಬಲ ದಲಿತ ಸಾಹಿತ್ಯದ್ದು. ಅದು ಜಾತಿವಾದಿ ಸಾಹಿತ್ಯ ಆಗಲಾರದು. ಜಾನಪದದ ಮೂಲ ತಳಹದಿ ದಲಿತರಲ್ಲಿದೆ. ಅದು ಸಾಹಿತ್ಯದ ರೂಪು ಪಡೆದುಕೊಂಡಾಗ ಕನ್ನಡ ಸಾಹಿತ್ಯ ಶ್ರೀಮಂತ ಸಾಹಿತ್ಯವಾಗಿ ಬೆಳೆಯುತ್ತದೆ ಎಂದರು.

‘ದಲಿತ ಬೆವರು ಸಂಸ್ಕೃತಿ ನಮ್ಮ ಬೇರು; ಅದನ್ನು ಬುದ್ದಿ ಆಳುತ್ತಿದೆ. ಬೆವರು ಸಂಸ್ಕೃತಿಯೇ ಆಳುವ ಸಂಸ್ಕೃತಿ ಆಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.ಉಪನ್ಯಾಸಕ ಜಂಭುನಾಥ ಕಂಚ್ಯಾಣಿ ‘ಸೃಜನಶೀಲ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿ, ವಿಜಾಪುರ ಜಿಲ್ಲೆಯ ಮಕ್ಕಳ ಸಾಹಿತಿಗಳ ಕೊಡುಗೆ ಸ್ಮರಿಸಿದರು. ದಶಕದಲ್ಲಿ ಸುಮಾರು 250ಕ್ಕೂ ಹೆಚ್ಚೂ ಮಕ್ಕಳ ಕೃತಿಗಳು ಹೊರಬಂದಿರುವುದು ಒಂದು ಐತಿಹಾಸಿಕ ದಾಖಲೆ ಎಂದು ಹೇಳಿದರು. ವಿವಿಧ ಪ್ರಕಾರಗಳ ಕೃತಿಗಳನ್ನು ಹೆಸರಿಸಿದರು.

ವರ್ತಮಾನ ಕಾಲದ ಪ್ರಜ್ಞೆ ಸಾಹಿತಿ, ಕವಿಯಾದವನಿಗೆ ಇರಬೇಕು ಆವಾಗ ಸೃಜನಶೀಲ ಸಾಹಿತ್ಯ ಹುಟ್ಟುತ್ತದೆ ಎಂದು ಹೇಳಿದರು.ಅಧ್ಯಕ್ಷತೆಯನ್ನು ಮಹಾಂತ ಗುಲಗಂಜಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹಾಜರಿದ್ದರು.

ಗೈರು: ಉದ್ಘಾಟನೆ ಮಾಡಬೇಕಿದ್ದ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ, ಅಧ್ಯಕ್ಷತೆ ವಹಿಸಿಬೇಕಿದ್ದ ಡಾ.ಡಿ.ಬಿ. ನಾಯಕ, ಸಂಶೋಧನಾ ಸಾಹಿತ್ಯ ಕುರಿತು ಉಪನ್ಯಾಸ ನೀಡಬೇಕಿದ್ದ ಡಾ.ಮಹೇಶ ಚಿಂತಾಮಣಿ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.ಸಿದ್ಧಲಿಂಗ ಹದಿಮೂರು ಸ್ವಾಗತಿಸಿದರು. ಎಸ್.ಬಿ. ಚೌಧರಿ ವಂದಿಸಿದರು. ಸಾವಿತ್ರಿ ಹಾಬಾಳ ನಿರೂಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.