ಆಲಮೇಲ: ಸಮೀಪದ ತಾರಾಪುರ ಗ್ರಾಮವು ಭೀಮಾ ಏತ ನೀರಾವರಿ ಯೋಜನೆಯ ಉದ್ದೇಶಕ್ಕಾಗಿ ನಿರ್ಮಿಸ ಲಾದ ಸೊನ್ನ ಸೇತುವೆಯಲ್ಲಿ ನೀರು ಸಂಗ್ರಹದ ಫಲವಾಗಿ ಇಡೀ ಗ್ರಾಮದ ತುಂಬಾ ಹಿನ್ನೀರು ಆವರಿಸಿದೆ. ಮುಳಗಡೆ ಭೀತಿ ಇಲ್ಲಿನ ಜನರಿಗೆ ಆವರಿಸಿದ್ದು, ಗ್ರಾಮದ ಸುತ್ತ ದಿಢೀರನೇ ಗುರುವಾರ ನೀರು ಬಂದಿರುವುದರಿಂದ ಜನರು ಆತಂಕ ಪಡುತ್ತಿದ್ದಾರೆ.
ಸಂಪೂರ್ಣ ಗ್ರಾಮವನ್ನು ಸ್ಥಳಾಂತರಿ ಸುವ ಪ್ರಕ್ರಿಯೆ ಭಾಗವಾಗಿ ಗ್ರಾಮದಿಂದ 2ಕಿ.ಮೀ ದೂರದಲ್ಲಿ ನವಗ್ರಾಮ ನಿರ್ಮಾಣ ಮಾಡಲಾಗು ತ್ತಿದೆ. ಇಲ್ಲಿ ಕೇವಲ 118 ಕುಟುಂಬಗಳಿಗೆ ನಿವೇಶನ ನೀಡಲು ಸಾಧ್ಯವಿದ್ದು. ಉಳಿದ ಇನ್ನೂ ರಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ವಿಲ್ಲ. ಹೀಗಾಗಿ ಇಡೀ ಗ್ರಾಮವೇ ಸಂಪೂರ್ಣ ಸ್ಥಳಾಂತರವಾಗುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎನ್ನು ವುದು ನಿವಾಸಿಗಳ ಮಾತು.
`ಪ್ರಜಾವಾಣಿ ಪ್ರತಿನಿಧಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಮನದಾಳದ ಅಳಲನ್ನು ತೋಡಿಕೊಂಡರು. ಭೀಮಾ ನದಿಪಾತ್ರದಲ್ಲಿ ಹೆಚ್ಚು ಮಳೆಯಾಗು ತ್ತಿದ್ದು ಮತ್ತು ಸೊನ್ನ ಬ್ಯಾರೇಜ್ನ ಎಲ್ಲ ಗೇಟುಗಳು ಮುಚ್ಚಿ ರುವುದರಿಂದ ನೀರು ಸಂಗ್ರಹ ಜಾಸ್ತಿ ಯಾಗಿ ಹಿನ್ನೀರು ಗ್ರಾಮಕ್ಕೆ ಬರುತ್ತಿದೆ. ಇದೇ ವೇಗದಲ್ಲಿ ನೀರು ಬಂದರೆ ನಮ್ಮ ಗ್ರಾಮದ ಸಂಪರ್ಕ ಕಡಿದು ಹೋಗಿ ನಾವು ನಿರಾಶ್ರಿತರಾಗು ತ್ತೇವೆ~ ಎಂದು ಗ್ರಾ.ಪಂ ಸದಸ್ಯ ದೇವಪ್ಪಗೌಡ ಬಿರಾದಾರ ಹೇಳಿದರು.
`ಹೆಚ್ಚಾದ ನೀರು ಗ್ರಾಮ ಸುತ್ತುವರಿದಿದ್ದು, ಶೌಚಾಲಯಕ್ಕೆ ಹೊರ ಹೋಗುವುದು ಸೇರಿದಂತೆ ಎಲ್ಲಕ್ಕೂ ತೊಂದರೆಯಾಗಿದೆ, ಸೊಳ್ಳೆಕಾಟ, ಹುಳುಹುಪ್ಪಡಿಗಳು ಗ್ರಾಮದಲ್ಲಿ ಹಿನ್ನೀರಿನ ಮೂಲಕ ಬರುತ್ತಿವೆ, ಇದರಿಂದ ಹಲವು ರೋಗ ಬರುವ ಸಾಧ್ಯತೆ ಇದೆ. ಆದ್ದರಿಂದ ನೀರು ಸಂಗ್ರಹಿಸುವುದನ್ನು ತಡೆಯಬೇಕು~ ಎಂದು ಗ್ರಾಮದ ಯುವ ಮುಖಂಡ ಶ್ರೀಮಂತ ದುದ್ದಗಿ ಹೇಳಿದರು.
`ಸೊನ್ನ ಬ್ಯಾರೇಜ್ನಲ್ಲಿ ಇನ್ನೂ ನೀರು ಸಂಗ್ರಹಿಸುವುದಾಗಿ ಹೇಳುವ ಅಲ್ಲಿನ ಅಧಿಕಾರಿಗಳು ನಮ್ಮ ಕೂಗು ಆಲಿಸುತ್ತಿಲ್ಲ; ನಮಗೆ ಶಾಶ್ವತ ಸೂರು ಆಗುವವರೆಗೆ ನಾವು ಈ ಗ್ರಾಮದಲ್ಲಿ ಇರುತ್ತೇವೆ, ಭೀಮಾ ಏತ ನೀರಾವರಿ ಯೋಜನೆ ಅಧಿಕಾರಿಗಳು ಇಡೀ ಗ್ರಾಮ ಸಂಪೂರ್ಣ ಸ್ಥಳಾಂತರ ಮಾಡುವ ದಿಸೆಯಲ್ಲಿ ಆಲೋಚಿಸಬೇಕು, ಇನ್ನೂ 30 ಎಕರೆಯಷ್ಟು ಜಾಗ ಖರೀದಿಸಿ ಎಲ್ಲರಿಗೂ ನಿವೇಶನ ಹಂಚಬೇಕು, ಅಲ್ಲಿ ಎಲ್ಲ ಮೂಲ ವ್ಯವಸ್ಥೆ ಯಾಗಬೇಕು, ಅಲ್ಲಿವರೆಗೆ ನಮ್ಮ ಈ ಗ್ರಾಮದಲ್ಲಿ ಎಲ್ಲ ಸೌಕರ್ಯಗಳು ಸಿಗುವಂತಾಗಬೇಕು~ ಎಂದು ಆಗ್ರಹಿಸಿದರು.
ಸಿದ್ದಣ್ಣಗೌಡ ಇಂಡಿ ಪ್ರಕಾರ, `ಮುಳಗಡೆ ಗ್ರಾಮವೆಂದು ಇಲ್ಲಿಗೆ ಯಾವುದೇ ಮೂಲ ಸೌಕರ್ಯವನ್ನು ಅಧಿಕಾರಿಗಳು ಕಲ್ಪಿಸುತ್ತಿಲ್ಲ, ಅಧಿಕಾರ ಗಳ ನಿರ್ಲಕ್ಷ್ಯದಿಂದ ನಾವು ಅನಾಥ ರಾಗಿದ್ದೇವೆ. ನಮಗೆ ನವ ಗ್ರಾಮದಲ್ಲಿ ನಿವೇಶನವು ನೀಡುತ್ತಿಲ್ಲ, ಎಲ್ಲವೂ ಸಿದ್ಧವಿರುವ ನವ ಗ್ರಾಮದಲ್ಲಿ ಕೇವಲ 118 ಕುಟುಂಬಗಳಿಗೆ ನಿವೇಶನ ವಿತರಿಸಲು ಅವಕಾಶವಿದೆ. ಉಳಿದ 200 ಕುಟುಂಬಗಳಿಗೆ ನಿವೇಶನವಿಲ್ಲ. ಅವರು ಎಲ್ಲಿಗೆ ಹೋಗಬೇಕು?
ನಮಗೆ ನೀಡಿರುವ ಪರಿಹಾರ ಧನವು ಖಾಲಿಯಾಗಿ ಹಲವು ವರ್ಷಗಳೇ ಆದವು. ನಮಗೆ ಇಲ್ಲಿ ಖಾಲಿ ನಿವೇಶನ ನೀಡಿದರೂ ಮನೆ ಕಟ್ಟಸಿ ಕೊಳ್ಳುವ ಶಕ್ತಿಯೂ ಇಲ್ಲ, ಆದಷ್ಟು ಬೇಗನೆ ಅಧಿಕಾರಿಗಳು ಜಮೀನು ಖರೀದಿಸಿ ಎಲ್ಲರಿಗೂ ನಿವೇಶನ ನೀಡಿದರೆ ನಾವು ಗ್ರಾಮ ಸ್ಥಳಾಂತರ ಮಾಡುತ್ತೇವೆ, ಅಲ್ಲಿಯವರೆಗೂ ನಮಗೆ ಎಲ್ಲ ಸೌಕರ್ಯಗಳು ನೀಡಬೇಕು~ ಎಂಬುದು ಅವರ ಮನವಿ.
ಮುಳುಗಡೆ ಗ್ರಾಮವೆಂದು ಅಧಕಾರಿಗಳು ಇಲ್ಲಿಗೆ ಮೂಲ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಈ ಗ್ರಾಮಕ್ಕೆ ರಸ್ತೆ ಇಲ್ಲ, ವಿದ್ಯುತ್, ಕುಡಿಯುವ ನೀರು ಇತ್ಯಾದಿ ಹಳೇ ಸೌಲಭ್ಯಗಳೇ ಇದ್ದು, ಹೊಸ ಯೋಜನೆಗಳು ಇಲ್ಲ, ಮಳೆಗೆ ಮನೆ ಬಿದ್ದು ಹೋದರೂ ನಮಗೆ ಪರಿಹಾರ ಸಿಗುವುದಿಲ್ಲ~ ಎಂದು ಶಂಕರಗೌಡ ಪಾಟೀಲ, ನಾಗರಾಜ ಮಳ್ಳಿ, ಮಹಿಳೆಯರಾದ ಅಂಜನಾಬಾಯಿ ಮಾದಾರ, ಸೀತಾಬಾಯಿ ಮಾದಾರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.