ದೇವರಹಿಪ್ಪರಗಿ: ದೇವರಹಿಪ್ಪರಗಿ–ತಾಳಿಕೋಟೆ ಪಟ್ಟಣದ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಬರುವ ಬೂದಿಹಾಳ ಡೋಣ, ಬಿ.ಬಿ. ಇಂಗಳಗಿವರೆಗಿನ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿ, ತಗ್ಗು ದಿಣ್ಣೆಗಳಿಂದ ಕೂಡಿದೆ.ಈ ರಸ್ತೆಯಲ್ಲಿ 20 ಕಿ.ಮೀ ದೂರ ಸಂಚರಿಸಲು 1 ಗಂಟೆ ಸಮಯ ವ್ಯರ್ಥವಾಗುತ್ತಿದೆ.
ಬೂದಿಹಾಳ ಡೋಣ ಗ್ರಾಮದ ಐ. ಎಸ್.ಇಜೇರಿ ಮತ್ತು ಎಸ್.ಜಿ.ಬಿರಾದಾರ ಮಾತನಾಡಿ, ರಸ್ತೆ ದುರಸ್ತಿಗಾಗಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಬಹುತೇಕ ತಗ್ಗುಗಳಿದ್ದು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಚಾಲಕರು ಪರದಾಡುವಂತಾಗಿದೆ. ಜನಸಾಮಾನ್ಯರು ಪ್ರಯಾಸ ಪಟ್ಟು ಪ್ರಯಾಣಿಸಬೇಕಾಗಿದೆ. ಯಾವುದೇ ಸರ್ಕಾರ ಬಂದರೂ ಸುಸಜ್ಜಿತ ರಸ್ತೆ ನಿರ್ಮಾಣ ಮಾಡದಿರುವುದು ವಿಷಾದದ ಸಂಗತಿ ಎಂದು ಬೇಸರದಿಂದ ಹೇಳಿದರು.
ಬಹುತೇಕ ರಸ್ತೆಗಳು ಎರೆಮಣ್ಣಿನಿಂದ ಕೂಡಿರುವ ಕಾರಣ ಪ್ರತಿ ವರ್ಷ ಡಾಂಬರು ಕಿತ್ತು ಹೋಗುತ್ತದೆ. ಹಾಗಾಗಿ ಪ್ರತಿವರ್ಷ ದುರಸ್ತಿ ತಪ್ಪಿದ್ದಲ್ಲ. ಆದ್ದರಿಂದ ಈ ಭಾಗಕ್ಕೆ ಅತ್ಯುತ್ತಮ ದರ್ಜೆಯ ರಸ್ತೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಬೂದಿಹಾಳ ಡೋಣ ಗ್ರಾಮದ ಶಿವಾನಂದ ಸಾತಿಹಾಳ, ಜಿ.ಕೆ.ಹಿರೇಮಠ, ಮಹಾದೇವ ಸಾಲೋಡಗಿ, ಹಣಮಂತ್ರಾಯ ಬಡಿಗೇರ, ಶಂಕರಗೌಡ ಬಿರಾದಾರ ಆಗ್ರಹಿಸಿದ್ದಾರೆ.
**
ಕ್ಷೇತ್ರದ ಶಾಸಕನಾಗಿ ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ರಸ್ತೆಗಳ ದುರಸ್ತಿ ಕುರಿತು ಮಾಹಿತಿ ಪಡೆದು ಕ್ರಮ ಕೈಕೊಳ್ಳಲಾಗುವುದು
– ಸೋಮನಗೌಡ ಪಾಟೀಲ ಸಾಸನೂರ ಶಾಸಕರು, ದೇವರಹಿಪ್ಪರಗಿ
**
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ತಕ್ಷಣವೇ ನೂತನ ಶಾಸಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು – ಶ್ರೀಕಾಂತ ವಾಲಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ಅಮರನಾಥ ಹಿರೇಮಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.