ADVERTISEMENT

ವಿಜಾಪುರದಲ್ಲಿ ಹೈಟೆಕ್ ಶೀತಲ ಗೃಹ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 4:30 IST
Last Updated 14 ಆಗಸ್ಟ್ 2012, 4:30 IST

ವಿಜಾಪುರ: ತೋಟಗಾರಿಕೆ ಬೆಳೆಗಳಲ್ಲಿ ಮುಂಚೂಣಿಯಲ್ಲಿರುವ ವಿಜಾಪುರ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸಲು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಟ್ಟದ ಹೈಟೆಕ್ ಶೀತಲಗೃಹ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲ ಸೌಕರ್ಯಗಳ ಅಭಿವೃದ್ಧಿ ಇಲಾಖೆ ಸಚಿವ ಸುನೀಲ್ ವಲ್ಯ್‌ಪುರ ಹೇಳಿದರು.

ಸರ್ಕಾರದ ಶೇ 30ರಷ್ಟು ಹಾಗೂ ಸಾರ್ವಜನಿಕರ ಶೇ 70ರಷ್ಟು ಪಾಲುಗಾರಿಕೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ವಿಜಾಪುರ ವಿಮಾನ ನಿಲ್ದಾಣ ಸ್ಥಾಪನೆಯನ್ನು ಚೆನ್ನೈ ಮೂಲದ ಮಾರ್ಗ ಕಂಪನಿಗೆ ವಹಿಸಲಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಈ ವರೆಗೆ ಯಾವುದೇ ಪ್ರಗತಿ ಸಾಧಿಸಿಲ್ಲ. ನಾಗರಿಕ ವಿಮಾನಯಾನ ಜೊತೆಗೆ ಕಾರ್ಗೊ ಸೇವೆ ಆರಂಭಿಸಲು ಹೆಚ್ಚುವರಿ ಜಮೀನು ಬೇಡಿ ಕೆಗೂ ಸಹ ನಾವು ಪೂರಕವಾಗಿ ಸ್ಪಂದಿಸಿದರೂ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ. ಶೀಘ್ರವೇ ಕಂಪೆನಿಯೊಂದಿಗೆ ಚರ್ಚಿಸ ಲಾಗುವುದು. ಕಂಪೆನಿಗೆ ಕಾಲಮಿತಿಯೊಳಗೆ ಯೋಜನೆ ಅನುಷ್ಠಾನ ಸಾಧ್ಯವಾಗದಿದ್ದರೆ ಪರ್ಯಾಯ  ಕ್ರಮಕ್ಕೆ ಸರ್ಕಾರ ಚಿಂತಿಸಲಿದೆ~ ಎಂದರು.

ಐತಿಹಾಸಿಕ ಹಾಗೂ ತೋಟಗಾರಿಕಾ ಕ್ಷೇತ್ರವಾದ ವಿಜಾಪುರ ಜಿಲ್ಲೆಗೆ ದೇಶ-ವಿದೇಶಗಳಿಂದ ಪ್ರವಾಸಿ ಗರು, ಆಗಮಿಸುವ ಹಿನ್ನಲೆಯಲ್ಲಿ ವಿಮಾನಯಾನ ಸೇವೆ ಆರಂಭಿಸಿದರೆ ಹೆಚ್ಚು ಪ್ರಯೋಜನ ಹಾಗೂ ಲಾಭದಾಯಕ ಎಂಬುದು ಸರ್ಕಾರದ ಆಶಯವಾಗಿದೆ ಎಂದು ತಿಳಿಸಿದರು.

ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ರೂ. 1533.75 ಹೆಕ್ಟೇರ್ ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಭೂಸ್ವಾಧೀನಕ್ಕೆ ಅಗತ್ಯವಿರುವ ಹಣ ವನ್ನು ಬಾಗಲಕೋಟೆಗೆ ರೂ. 25ಕೋಟಿ,  ಬೆಳಗಾವಿಗೆ ಜಿಲ್ಲಾಧಿಕಾರಿ ಗಳಿಗೆ ರೂ.19.97ಕೋಟಿ  ಹಾಗೂ ರೈಲ್ವೆ ಇಲಾಖೆಗೆ ರೂ.20 ಕೋಟಿ ಸೇರಿದಂತೆ ರೂ.55.15 ಕೋಟಿ ಬಿಡುಗಡೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಬಹುಪಾಲು 1533.76 ಹೆಕ್ಟೇರ್ ಭೂಸ್ವಾಧೀನ ಪಡಿಸಿಕೊಳ್ಳಬೇಕಾಗಿದ್ದು, ಸೆಪ್ಟೆಂಬರ್‌ನಲ್ಲಿ 217 ಹಾಗೂ ಅಕ್ಟೋಬರ್‌ನಲ್ಲಿ 275 ಹೆಕ್ಟೇರ್ ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು. ಒಂದು ಎಕರೆ ನೀರಾವರಿಗೆ ರೂ.12ಲಕ್ಷ, ಒಣಭೂಮಿಗೆ ರೂ.6ಲಕ್ಷ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ವಿಜಾಪುರದ ಇಬ್ರಾಹಿಂಪೂರ ಹಾಗೂ ಜುಮನಾಳ ರೈಲ್ವೆ ಮೇಲ್ಸೆತುವೆ ನಿರ್ಮಾಣ ಕುರಿತಂತೆ ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ವಿಜಾಪುರ ಒಳಚರಂಡಿ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.