ತಾಳಿಕೋಟೆ: ‘ಪ್ರಜಾವಾಣಿ’ಯಲ್ಲಿ ಮೇ 31ರಂದು ಪ್ರಕಟವಾದ ‘ಕುಡಿಯುವ ನೀರಿಗೆ ಹಾಹಾಕಾರ’ ಸುದ್ದಿಯ ಹಿನ್ನೆಲೆಯಲ್ಲಿ ಎಚ್ಚತ್ತುಕೊಂಡಿರುವ ಪುರಸಭೆ ಶುಕ್ರವಾರ ಅಧಿಕಾರಿಗಳು ಹಾಗೂ ಸದಸ್ಯರು ಖುದ್ದಾಗಿ ನಿಂತು ಸ್ವಚ್ಛತಾ ಕಾರ್ಯವನ್ನು ಪರಿಶೀಲನೆ ನಡೆಸಿದರು.
ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಹು ಚರ್ಚಿತವಾದ ನಂತರ ಅಧ್ಯಕ್ಷರಾದಿಯಾಗಿ ಎಲ್ಲ ಸದಸ್ಯರೂ ಶುದ್ಧೀಕರಣ ಕಾರ್ಯಾಗಾರ ಘಟಕಕ್ಕೆ ಭೇಟಿ ನೀಡಿ ಶುದ್ಧ ಕುಡಿಯುವ ನೀರು ಕೊಡುವುದು ನಮ್ಮ ಮೊದಲ ಆದ್ಯತೆ ಮತ್ತು ಬದ್ದತೆ ಎಂದಿದ್ದರು.
ಶುಕ್ರವಾರ ಬೆಳಿಗ್ಗೆಯಿಂದಲೇ ಫಿಲ್ಟರ್ ಬೆಡ್ನ್ನು ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ಎರಡು ಅಡಿಯಷ್ಟು ಕೆಳಗೆ ತುಂಬಿದ್ದ ಕೊಳೆಯನ್ನು ಸಿಬ್ಬಂದಿ ಶ್ರಮವಹಿಸಿ ಹೊರಹಾಕಿದರು. ನೀರಿನ ಕೊರತೆ ಹಿನ್ನೆಲೆಯಲ್ಲಿ ಫಿಲ್ಟರ್ ಬೆಡ್ನ್ನು ಎರಡು ದಿನಕ್ಕೊಮ್ಮೆ ತೊಳೆಯಲಾಗುತ್ತಿತ್ತು ಆದರೆ ಈಗ ಪ್ರತಿದಿನ ತೊಳೆಯಲು ಪುರಸಭೆ ಮುಂದಾಗಿದೆ. ಕುಡಿಯುವ ನೀರಿನ ಶುದ್ಧತೆ ಬಗ್ಗೆ ಪರಿಶೀಲನೆಗೆ ಕಳುಹಿಸಲಾಗಿತ್ತು. ಕುಡಿಯುವುದಕ್ಕೆ ತೊಂದರೆಯಿಲ್ಲ ಎಂದು ವರದಿ ಬಂದಿದೆ. ಆದರೂ ನಾಗರಿಕರು ನೀರನ್ನು ಕಾಯಿಸಿ ಆರಿಸಿ ಶೋಧಿಸಿ ಕುಡಿಯುವಂತೆ ಡಂಗೂರ ಸಾರಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಎ.ಬಿ.ಕಲಾಲ ತಿಳಿಸಿದರು.
‘ತಾಂತ್ರಿಕ ಸಿಬ್ಬಂದಿ ಕೊರತೆ, ಸಮರ್ಪಕ ಮೇಲ್ವೀಚಾರಣೆ ಕೊರತೆಯಿಂದ ಸ್ಥಾವರಗಳು ಸರಿಯಾಗಿ ನಿರ್ವಹಣೆ ಆಗಿಲ್ಲ 40 ಸಾವಿರ ಜನಸಂಖ್ಯೆಗೆ ನೀರು ಖಾತ್ರಿ ಕೊಡದಂತಾಗಿದೆ. ಆದಾಗ್ಯೂ ಶಕ್ತಿಮೀರಿ ಪ್ರಯತ್ನ ನಡೆದಿದೆ. ಗುರುವಾರ ಸಂಜೆಯೆ ಸಿಬ್ಬಂದಿ ಸಬೆ ಕರೆದು ಪ್ರತಿ ಹಂತದಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇದಕ್ಕೆ ಬಲ ತುಂಬಲು ತಾಂತ್ರಿಕ ಸಿಬ್ಬಂದಿ ಕೊರತೆ ನೀಗಿದರೆ ಈ ತೊಂದರೆಗಳಿಗೆ ಪೂರ್ಣ ವಿರಾಮ ಸಿಕ್ಕಬಹುದು’ ಎಂದು ಸ್ಥಳದಲ್ಲಿದ್ದ ಹಿರಿಯ ಸದಸ್ಯ ಬಿ.ವಿ.ಶಿಂಧೆ ಹಾಗೂ ಪ್ರಭುಗೌಡ ಮದರಕಲ್ಲ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.