ADVERTISEMENT

ಸಂಘಟಿತರಾಗಲು ನೇಕಾರರಿಗೆ ಲಕ್ಷ್ಮೀನಾರಾಯಣ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 10:45 IST
Last Updated 24 ಜನವರಿ 2012, 10:45 IST

ಆಲಮಟ್ಟಿ: ರಾಜ್ಯದಲ್ಲಿ ನೇಕಾರರ ಜನಸಂಖ್ಯೆ 50 ಲಕ್ಷ ಇದೆ.  ನೇಕಾರರು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿಯಲು ಸಂಘಟನೆಯ ಕೊರತೆಯೇ ಕಾರಣ ಎಂದು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಹೇಳಿದರು.

ಗೊಳಸಂಗಿಯಲ್ಲಿ ನಡೆದ  ನೇಕಾರ ಸಭೆಯಲ್ಲಿ ಅವರು ಮಾತನಾಡಿದರು.  ರಾಜ್ಯದಲ್ಲಿ ರೈತ ಸಂಘಟನೆಗಳು ಪ್ರಬಲವಾಗಿರುವ ಕಾರಣಕ್ಕೆ ಅವರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸುತ್ತದೆ. ಅದರಂತೆ ನೇಕಾರ ಒಗ್ಗಟ್ಟಿನಿಂದ ಹೋರಾಟ  ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ನೇಕಾರರ ಒಳಿತಿಗಾಗಿ ಕೈಮಗ್ಗ ಅಭಿವೃದ್ಧಿ ನಿಗಮ ಶ್ರಮಿಸುತ್ತಿದೆ. ನೇಕಾರರ ಮನೆ ಸಾಲವನ್ನು ಮನ್ನಾ ಮಾಡಲಾಗಿದೆ. ನೇಕಾರ ಮಕ್ಕಳಿಗೆ ಸರಕಾರ ವಿದ್ಯಾರ್ಥಿ ವೇತನ ನೀಡುತ್ತಿದೆ. ನೇಕಾರರ ಕೂಲಿ ದರವನ್ನು  50ರಷ್ಟು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಮದನೂರಿನಲ್ಲಿರುವ  ದೇವರ ದಾಸೀಮಯ್ಯವರ ದೇವಸ್ಥಾನವನ್ನು  ನಿರ್ಮಿಸಿ, ಪ್ರವಾಸಿ ತಾಣವನ್ನಾಗಿ ಮಾಡಲು ವೇಗದ ಹೆಜ್ಜೆ ಇರಿಸಿದ್ದೇವೆ. ಇದಕ್ಕೆ  ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
 ಮುಖಂಡ ರವೀಂದ್ರ ಕಲಬುರ್ಗಿ ಮಾತನಾಡಿದರು. ಡಿ.ಬಿ. ಕುಪ್ಪಸ್ತ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ರಾಘವೇಂದ್ರಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಮುತ್ತಗಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಭಾಗ್ಯಲಕ್ಷ್ಮಿನಾರಾಯಣ, ಪ್ರಭಾಕರ ಶೆಲ್ಲೇದ, ರತ್ನಾ ಮಲಘಾಣ, ರಾಮಕೃಷ್ಣ ಕಾಳಗಿ, ಆನಂದಮೂರ್ತಿ, ವೀರಣ್ಣ ಸೊನ್ನದ, ಎನ್.ಎಸ್.ಭಾವಿಕಟ್ಟಿ, ದೇವಾಂಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನಪ್ಪ ತೆಳಗಡಿ, ವಿರಣ್ಣ ಸೊನ್ನದ, ಶಾರದಾ ಯಂಕಂಚಿ, ಆನಂದಯ್ಯ ದೇವಾಂಗಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.