ADVERTISEMENT

ಸಂಭ್ರಮದ ಗ್ರಾಮದೇವತೆ ಜಾತ್ರೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 5:20 IST
Last Updated 4 ಜೂನ್ 2011, 5:20 IST

ಮುದ್ದೇಬಿಹಾಳ: ಪಟ್ಟಣದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಆಚರಿಸ ಲಾಗುವ ಗ್ರಾಮದೇವತೆ ಜಾತ್ರೆಗೆ ಶುಕ್ರವಾರ ಭಕ್ತಿ ಶ್ರದ್ಧೆಯಿಂದ ಚಾಲನೆ ನೀಡಲಾಯಿತು.

ಐದು ದಿನಗಳ ಕಾಲ ನಡೆಯುವ ಜಾತ್ರೆ ಈ ಭಾಗದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.
ಸಂಪ್ರದಾಯದಂತೆ ಬೆಳಿಗ್ಗೆ ಊರ ಪ್ರಮುಖರು ಸಕಲ ವಾದ್ಯ ವೈಭವ ದೊಂದಿಗೆ ಗ್ರಾಮದ ಗೌಡರಾದ ಬಸನಗೌಡ ರಾಯನಗೌಡ ಪಾಟೀಲ, ಬಸರಕೋಡದ ನಾಡಗೌಡರು ಹಾಗೂ ನಾಯ್ಕೋಡಿ (ವಾಲಿಕಾರ) ಅವರ ಮನೆಗೆ ದಂಡೆ ಒಯ್ಯುವ ಮೂಲಕ ಜಾತ್ರೆಗೆ ಚಾಲನೆ ನೀಡುತ್ತಾರೆ.

ನಂತರ ಗ್ರಾಮದೇವತೆ ದ್ಯಾಮವ್ವ ನಿಗೆ ಬಸರಕೋಡದ ನಾಡಗೌಡರ ಮನೆಯಿಂದ ಸೀರೆ ಹಾಗೂ ತಾಳಿಯನ್ನು ತರಲಾಗುತ್ತದೆ. ದೇವಿಯನ್ನು ಎತ್ತಿನ ಬಂಡಿಯಲ್ಲಿ ಪ್ರತಿಷ್ಠಾಪಿಸಿದ ನಂತರ ಮೆರವಣಿಗೆ ಆರಂಭವಾಗುತ್ತದೆ.

ಮೆರವಣಿಗೆಯಲ್ಲಿ 17 ಹಳ್ಳಿಗಳ ಜತೆ ಬದಾಮಿಯ ಡೊಳ್ಳು ಕುಣಿತದ ಸಂಘ, ಜಮಖಂಡಿಯ ಬ್ಯಾಂಜೋ ಪ್ರಮುಖ ಆಕರ್ಷಣೆಯಾಗಿದ್ದವು.

ಗ್ರಾಮದೇವತೆಯನ್ನು  ಮೆರವಣಿಗೆ ಮೂಲಕ ಗ್ರಾಮದೇವತೆ ದೇವಸ್ಥಾನಕ್ಕೆ ಕರೆತಂದು ಪ್ರತಿಷ್ಠಾಪಿಸಿದ ನಂತರ ಅವಳ ಸಹೋದರಿ ಶಾರದಾದೇವಿಯನ್ನು ಸಹ ಪ್ರತಿಷ್ಠಾಪಿಸಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಶೃಂಗಾರ ಗೌಡ ಪಾಟೀಲ, ಚನ್ನಪ್ಪ ಕಂಠಿ, ಅಶೋಕ ನಾಡಗೌಡ, ರಮೇಶ ಓಸ್ವಾಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.