ADVERTISEMENT

ಸಚಿವ ಸ್ಥಾನ ಶಾಶ್ವತ ಅಲ್ಲ: ಬೆಳ್ಳುಬ್ಬಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 7:55 IST
Last Updated 15 ಜುಲೈ 2012, 7:55 IST

ವಿಜಾಪುರ: ~ಜಾತ್ಯತೀತ ಮನೋಭಾವ ಹೊಂದಿದ ನನ್ನ ತ್ಯಾಗವನ್ನು ಬಿಜೆಪಿ ನಾಯಕರು ನೆನಪಿಟ್ಟುಕೊಂಡು ಮತ್ತೆ ಸಚಿವ ಸ್ಥಾನ ನೀಡಿದ್ದಾರೆ. ಈ ಸಚಿವ ಸ್ಥಾನ ನನಗೆ ಶಾಶ್ವತವಲ್ಲ. ಅಧಿಕಾರ ಬಂದರೂ ಒಳ್ಳೆಯದು, ಹೋದರೂ ಒಳ್ಳೆಯದು. ಸ್ವಂತಕ್ಕಿಂತ ಸಮಾಜ ಸೇವೆ ಮುಖ್ಯ~ ಎಂದು  ನೂತನ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು ಹೇಳಿದರು.

ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಗಾಣಿಗ ಸಮಾಜದ ವತಿಯಿಂದ ಹಮ್ಮಿಕೊಂಡ ವಿದ್ಯಾರ್ಥಿ ವಸತಿ ನಿಲಯದ ಅಡಿಗಲ್ಲು ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರ ನನಗೆ ಸಚಿವ ಸ್ಥಾನ ನೀಡುವುದರ ಮೂಲಕ ಜಿಲ್ಲೆಯ ಬಹುದಿನದ ಕನಸು ಪೂಜ್ಯ ಸಿದ್ದೇಶ್ವರ ಶ್ರೀಗಳ ಆಶಿರ್ವಾದದಿಂದ ಈಡೇರಿದಂತಾಗಿದೆ ಎಂದರು.

 ಸ್ವಂತಕ್ಕಿಂತ ಸಮಾಜ ಸೇವೆ ಮುಖ್ಯ. ಇಂದಿನ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಬೇಡಿಕೆಗಳು ಈಡೇರಬೇಕಾದರೆ ಸಂಘಟನೆಗಳಿಂದ ಮಾತ್ರ ಸಾಧ್ಯ. ಜಿಲ್ಲೆಯ ಬಹುದೊಡ್ಡ ನೀರಾವರಿ ಯೋಜನೆಗಳಾದ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಗೆ ಸರ್ಕಾರ ಈಗಾಗಲೆ ಒಪ್ಪಿಗೆ ಸೂಚಿಸಿದೆ. ಮಸೂತಿಯ 1 ಸಾವಿರ ಕೋಟಿ ರೂ. ಯೋಜನೆಗೆ ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸ್ಥಳಿಯ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಜನ ಹೃದಯ ಶ್ರೀಮಂತಿಕೆ ಉಳ್ಳ ಜನ, ಈ ಜನರ ಸೇವೆ ಮಾಡುವ ಅವಕಾಶ ಸಚಿವ ಇವರಿಬ್ಬರಿಂದ ಈ ನೆಲ ಸುಜಲ, ಸುಫಲವಾಗಲಿ. ನಾಡಿಗೆ ಅನ್ನ ನೀಡುವ ರೈತನಿಗೆ ಉತ್ತಮ ನೀರು ಮಾರುಕಟ್ಟೆ ಒದಗಿಸಿದರೆ ಭಾರತವನ್ನು ಶ್ರೀಮಂತಗೊಳಿಸುತ್ತಾನೆ. ಇಂಥಹ ರೈತರನ್ನು ಪೊಷಿಸುವ ಕೆಲಸ ನಡೆಯಬೇಕಿದೆ ಎಂದರು.

ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರಿ, ಛಲವನ್ನು ಇಟ್ಟುಕೊಂಡು ಕಷ್ಟಪಟ್ಟು ಓದಿದ ಪ್ರತಿಭಾವಂತರು ಗುರು ಹಿರಿಯರ ಆಶಿರ್ವಾದದಿಂದ ಏನನ್ನಾದರೂ ಸಾಧಿಸಲು ಸಾಧ್ಯ. ಇಂದಿನ ದಿನದಲ್ಲಿ ನಗರ ಪ್ರದೇಶದಂತೆ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸರ್ಕಾರ ಉತ್ತಮ ಶಿಕ್ಷಣ ಸೌಲಭ್ಯ ಒದಗಿಸುತ್ತಿದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ವನಶ್ರೀ ಸಂಸ್ಥಾನ ಮಠದ ಜಯದೇವ ಜಗದ್ಗುರುಗಳು ವಿದ್ಯಾರ್ಥಿಗಳ ವಸತಿ ನಿಲಯದ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ಗಣ್ಯರನ್ನು ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಜಿಲ್ಲೆಯ ಶಾಸಕ ಪಿ.ಸಿ. ಗದ್ದಿಗೌಡರ, ಶಾಸಕ ರಮೇಶ ಭೂಸನೂರ, ನಗರ ಸಭೆ ಸದಸ್ಯ ಸಿದ್ದು ನ್ಯಾಮಗೌಡ ಭಾಗವಹಿಸಿದ್ದರು. ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಶರಣಬಸಪ್ಪ ಎಸ್. ಅರಕೇರಿ, ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ, ಎನ್.ಎಸ್. ಲೋಣಿ, ಕೆ.ಎಸ್. ಪಾಟೀಲ, ಡಾ. ಎಂ. ಎಸ್. ಕಲ್ಲೂರ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.