ADVERTISEMENT

ಸರಳ ಮದುವೆಗೆ ಆದ್ಯತೆ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 10:00 IST
Last Updated 2 ಜೂನ್ 2011, 10:00 IST

ಮುದ್ದೇಬಿಹಾಳ: ಸರಳತೆ ಇಂದಿನ ಆದರ್ಶವಾಗಿದ್ದು, ಎಲ್ಲರೂ ದುಂದು ವೆಚ್ಚ ಕೈ ಬಿಟ್ಟು ಸರಳ ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡಬೇಕು ಎಂದು ದೇವರ ಹಿಪ್ಪರಗಿಯ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಅವರು ಭಾನುವಾರ ತಾಲ್ಲೂಕಿನ ಸರೂರ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ವೇದಮೂರ್ತಿ ನಾಗಯ್ಯ ಮರುಳ ಸಿದ್ದಯ್ಯ ಗುರುವಿನ ಅವರು ತಮ್ಮ ಮಕ್ಕಳ ವಿವಾಹದೊಂದಿಗೆ ಸಂಘಟಿಸಿದ್ದ ಉಚಿತ ಸಾಮೂಹಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅನೇಕ ರಾಜಕಾರಣಿಗಳು, ಚಿತ್ರ ನಟರು ಮಾಡಿಕೊಳ್ಳುವ ಅದ್ದೂರಿ ಮದುವೆಗಳು ಅನಗತ್ಯ ವೆಚ್ಚ ಆಗುತ್ತವೆ. ತಮ್ಮ ಮಕ್ಕಳ ಮದುವೆಯ ಜೊತೆಗೆ ಆರ್ಥಿಕವಾಗಿ ಬಡವರ ಮದುವೆಗಳನ್ನು ನೆರವೇರಿಸಿದರೆ ಪುಣ್ಯದ ಜೊತೆಗೆ ದೇಶಕ್ಕೆ ಆರ್ಥಿಕವಾಗಿ ಲಾಭ ಮಾಡಿದಂತೆ ಎಂದವರು ಹೇಳಿದರು.

ಸಮಾರಂಭದಲ್ಲಿ ಒಟ್ಟು 15 ಜನ ವಧು ವರರು ಹೊಸ ಬದುಕಿಗೆ ಕಾಲಿರಿಸಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ  ರಂಭಾಪುರಿ ಖಾಸಾ ಸಂಸ್ಥಾನ ಮಠದ ಮಳಲಿಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ ವಧು ವರರಿಗೆ ಸರಳ ಬದುಕು ಸಾಗಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಆಶೀರ್ವಚನ ನೀಡಿದರು.

ವೇದಿಕೆಯ ಮೇಲೆ  ಶಾಸಕ ಸಿ.ಎಸ್. ನಾಡಗೌಡ, ಎಂ.ಎಸ್.ಪಾಟೀಲ, ಹನುಮಂತಪ್ಪ ತೊಗರಿ, ಕೆಂಚಪ್ಪ ಬಿರಾದಾರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ದೇವಮ್ಮ ನಿಂಗಪ್ಪ ಬಪ್ಪರಗಿ, ಸಾಯಬಣ್ಣ ಆಲ್ಯಾಳ, ಮಲಕೇಂದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಮದರಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಹನುಮಂತ ಕುರಿ, ಸಿದ್ದಮ್ಮ ಬಸಪ್ಪ ಕಚೇರಿ, ರಾಜುಗೌಡ ಪಾಟೀಲ, ನಾಗಪ್ಪ ನರಕಲದಿನ್ನಿ, ಭೀಮಶೆಪ್ಪ ಮದರಿ, ಬಸವರಾಜ ಬನ್ನಿಗೋಳ, ಬಸನಗೌಡ ಕಂಬಳಿ, ಶ್ರೀ ರೇವಣಸಿದ್ದೇಶ್ವರ ಹಾಲು ಮತ ಗುರುಪೀಠದ ವೇ.ನಾಗಯ್ಯ ಗುರುವಿನ, ವೇದಮೂರ್ತಿ ಬಸಯ್ಯ ಸ್ವಾಮೀಜಿ, ಕೆಂಡದಮಠ ಬಂಕಾಪೂರ, ವೇ.ಸಣ್ಣಯ್ಯ ಗುರುವಿನ, ವೇ. ಮರುಳಸಿದ್ದಯ್ಯ ಗುರುವಿನ, ವೇ.ಸಿದ್ದಯ್ಯ ಗುರುವಿನ, ವೇ.ನಾಗಯ್ಯ ಗುರುವಿನ, ಬಸವರಾಜಪ್ಪ ದರ್ಶನಾಪೂರ ಮೊದಲಾದವರು ಉಪಸ್ಥಿತರಿದ್ದರು.

ಬಸವರಾಜ ಬಂಟನೂರ ಪ್ರಾರ್ಥಿಸಿದರು. ವೇ.ಸಂಗಯ್ಯ ಗುರುವಿನ ಸ್ವಾಗತಿಸಿದರು. ಶಿದ್ದು ಬಿಜ್ಜೂರ ನಿರೂಪಿಸಿದರು. ಮಲ್ಲಿಕಾರ್ಜುನ ವಡಗೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.