ವಿಜಾಪುರ: ಹೊಸ ಸಿಇಟಿ ನೀತಿ ವಿರೋ ಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ನಗರದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಇಲ್ಲಿಯ ಗಾಂಧಿಚೌಕ್ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ಎ.ಐ.ಡಿ.ಎಸ್.ಒ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಟಿ. ಭರತ್ಕುಮಾರ, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ–-2006 ವಿದ್ಯಾರ್ಥಿಗಳ ಭವಿಷ್ಯಕ್ಕೆ ಮೃತ್ಯು ಪತ್ರವಾಗಲಿದೆ ಎಂದರು. ರಾಜ್ಯ ಸರ್ಕಾರವು ಖಾಸಗಿ ಸಂಸ್ಥೆಗಳ ಲಾಬಿಗೆ ಮಣಿದು ಬಡ ವಿದ್ಯಾ ರ್ಥಿಗಳನ್ನು ಶಿಕ್ಷಣದಿಂದ ವಂಚಿತರಾಗು ವಂತೆ ಮಾಡುತ್ತಿದೆ ಎಂದು ದೂರಿದರು.
ಎಲ್ಲ ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ವಿತರಿಸಲು, ಬಡ ವಿದ್ಯಾರ್ಥಿಗಳ ಕೈಗೆಟುಕುವಂತೆ ಶುಲ್ಕ ನಿಗದಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ರೂಪಿಸಬೇಕಾ ಗಿದೆ. ಆದರೆ, ಈ ಕ್ರಮವನ್ನು ಕೈಬಿಟ್ಟು ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಸಂಪೂರ್ಣವಾಗಿ ಸರ್ಕಾರಿ ಮೆರಿಟ್ ಕೋಟಾವನ್ನೇ ರದ್ದುಗೊಳಿಸಲು ಹೊರಟಿ ರುವುದು ಸರಿಯಲ್ಲ. ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ಎಂಜಿನಿ ಯರಿಂಗ್, ವೈದ್ಯಕೀಯ ಮತ್ತು ಇತರ ವೃತ್ತಿಪರ ಕೋರ್ಸ್ಗಳಿಂದ ವಂಚಿತರಾಗ ಲಿದ್ದಾರೆ ಎಂದರು.
ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಆದರೆ, ರಾಜ್ಯ ಸರ್ಕಾರ ದುಡ್ಡು ಇರುವವರಿಗೆ ಮಾತ್ರ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿ ಬಡ ವಿದ್ಯಾರ್ಥಿಗಳಿಗೆ ಅವಕಾಶ ವಂಚಿತರ ನ್ನಾಗಿ ಮಾಡುತ್ತಿದೆ ಎಂದು ವಿದ್ಯಾರ್ಥಿನಿ ಗೀತಾ ಪಾಟೀಲ ದೂರಿದರು.
ವಿನೋದ, ಆನಂದ ಕುಂಟೋಜಿ, ಪೂಜಾ ಕುಲಕರ್ಣಿ, ಭಕ್ತಿ ಆರಾಧ್ಯ, ಶಿವಾನಂದ, ಕಾಶೀನಾಥ, ಶಿಲ್ಪಾ ಮದರಿ, ಸುನೀಲ್ ರಾಠೋಡ, ಸಿದ್ದು ಬಿರಾದಾರ, ಸಂಜೀವ ಕುಲಕರ್ಣಿ, ದೀಪಾ, ಸಾವಿತ್ರಿ, ಜ್ಯೋತಿ ಹಿಪ್ಪರಗಿ ಮುಂತಾದವರು ಭಾಗವಹಿಸಿದ್ದರು.
ಕಾಲೇಜು ಬಂದ್ಗೆ ಕರೆ
ಸಿಇಟಿ ಹೊಸ ನೀತಿ ವಿರೋಧಿಸಿ ಇದೇ 21ರಂದು ರಾಜ್ಯವ್ಯಾಪಿ ಪದವಿ ಪೂರ್ವ ಕಾಲೇಜುಗಳ ಬಂದ್ಗೆ ಎಐಡಿಎಸ್ಒ ಕರೆ ನೀಡಿದೆ. ವಿದ್ಯಾರ್ಥಿಗಳು–ಕಾಲೇಜುಗಳವರು ಇದನ್ನು ಯಶಸ್ವಿಗೊಳಿಸಬೇಕು ಎಂದು ಭರತ್ಕುಮಾರ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.