ಚಡಚಣ: ಇಲ್ಲಿಗೆ ಸಮೀಪದ ಲೋಣಿ (ಬಿ.ಕೆ)ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ಹಾಗೂ ಜಾನುವಾರುಗಳ ಭವ್ಯ ಪ್ರದರ್ಶನ ಹಾಗೂ ಮಾರಾಟ ಇಂದಿನಿಂದ ಐದು ದಿನಗಳ ವರೆಗೆ ಜರುಗಲಿದೆ.
ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ಆರಂಭಗೊಂಡಿದ್ದು, ಇಂದು ಬೆಳಿಗ್ಗ 8 ಗಂಟೆಗೆ ಸಿದ್ದೇಶ್ವರ ಪಲ್ಲಕ್ಕಿ ಮಹೋತ್ಸವ, ಮಧ್ಯಾಹ್ನ 12 ಗಂಟೆಗೆ ಹರದೇಶಿ–ನಾಗೇಶಿ ಸಂವಾದ ಗೀ ಗೀ ಪದಗಳ ಕಾರ್ಯಕ್ರಮ ಜರುಗಲಿದೆ.
ಸಂಜೆ 5 ಗಂಟೆಗೆ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ರಥೋತ್ಸವ ಜರುಗಲಿದೆ.
ಮಾರ್ಚ್ 2ರಂದು ಬೆಳಿಗ್ಗೆ ಗೀ ಗೀ ಪದಗಳ ಗಾಯನ, ರಾತ್ರಿ 8 ಗಂಟೆಗೆ ಸಿಡಿ ಮದ್ದು ಕಾರ್ಯಕ್ರಮ ಆಯೋಜಿಸ ಲಾಗಿದೆ. ನಂತರ ಗೀ ಗೀ ಪದಗಳ ಕಾರ್ಯಕ್ರಮ ಜರುಗಲಿದೆ.
3ರಂದು ಬೆಳಿಗ್ಗೆ ವಿವಿಧ ಕಲಾ ತಂಡಗಳಿಂದ ಗಾಯನ, ಸಂಜೆ 4 ಗಂಟೆಗೆ ಸುಪ್ರಸಿದ್ಧ ಮಲ್ಲರ ಕುಸ್ತಿ ಕಾಳಗ, ರಾತ್ರಿ 10 ಗಂಟೆಗೆ ಸತ್ಯ ಹರಿಶ್ಚಂದ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ.
4ರಂದು ಜಾತ್ರೆಗೆ ಆಗಮಿಸಿದ ಉತ್ತಮ ಜಾನುವಾರುಗಳ ಆಯ್ಕೆ ಹಾಗೂ 5ರಂದು ಆಯ್ಕೆಯಾದ ಉತ್ತಮ ಜಾನುವಾರುಗಳಿಗೆ ಪ್ರಶಸ್ತಿ ವಿತರಣಾ ಸಮಾರಂಭ ಜರುಗಲಿದೆ ಎಂದು ಶ್ರೀ ಸಿದ್ದೇಶ್ವರ ಟ್ರಸ್ಟ್ ಸಮಿತಿ ಅಧ್ಯಕ್ಷ ಸಿದರಾಯ ಮೇತ್ರಿ ಹಾಗೂ ಕಾರ್ಯಾಧ್ಯಕ್ಷ ಬಾಬುಗೌಡ ಪಾಟೀಲ (ಶಿರಗೂರ) ತಿಳಿಸಿದ್ದಾರೆ.
ಜಾತ್ರೆಗೆ ಆಗಮಿಸುವ ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರು, ವೈದ್ಯಕೀಯ ವ್ಯವಸ್ಥೆ, ಸೂಕ್ತ ರಕ್ಷಣೆ ಹಾಗೂ ಭಕ್ತಾದಿಗಳಿಗೆ ನಿರಂತರ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಟ್ರಸ್ಟ್ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.