ADVERTISEMENT

ಸೈನ್ಯ ಸೇರ್ಪಡೆ ಜಾಗೃತಿಗಾಗಿ ಸೈಕಲ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 9:40 IST
Last Updated 27 ಅಕ್ಟೋಬರ್ 2017, 9:40 IST

ವಿಜಯಪುರ: ವಿದ್ಯಾರ್ಥಿ ಸಮೂಹಕ್ಕೆ ಸೈನ್ಯ ಸೇರ್ಪಡೆಯ ಪ್ರೇರೇಪಣೆ ನೀಡಲು ಇಲ್ಲಿನ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ತಮೋಜಿತ್ ಬಿಸ್ವಾಸ್ ಸೈಕಲ್ ಪರ್ಯಟನೆ ಆರಂಭಿಸಿದರು. ವಿಜಯಪುರದಿಂದ ಕೊಡಗು ಸೈನಿಕ ಶಾಲೆವರೆಗೆ 632 ಕಿ.ಮೀ. ದೂರ ಸೈಕಲ್‌ನಲ್ಲಿ ಕ್ರಮಿಸಿ, ಜಾಗೃತಿ ಮೂಡಿಸುವ ಕಾರ್ಯಕ್ಕೆ ಗುರುವಾರ ಇಲ್ಲಿನ ಸೈನಿಕ ಶಾಲೆ ಆವರಣದಲ್ಲಿ ಚಾಲನೆ ನೀಡಲಾಯಿತು.

ಸೈನಿಕ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಯಾತ್ರೆ ಕೈಗೊಂಡಿರುವ ಕರ್ನಲ್ ತಮೋಜಿತ್ ಬಿಸ್ವಾಸ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಸೈಕಲ್ ಯಾತ್ರೆಗೆ ಶುಭ ಕೋರಿದರು. ‘ಭಾರತ್ ಮಾತಾ ಕೀ ಜೈ... ಭಾರತ್ ಮಾತಾ ಕೀ ಜೈ...’ ಎಂಬ ಘೋಷಣೆ ಮೊಳಗಿಸುವ ಮೂಲಕ ಬಿಸ್ವಾಸ್ ತಮ್ಮ ಸೈಕಲ್ ಯಾತ್ರೆ ಆರಂಭಿಸಿದರು.

ಆಲಮಟ್ಟಿ, ಹೊಸಪೇಟೆ, ಚಿತ್ರದುರ್ಗ, ಚಿಕ್ಕನಾಯಕನಹಳ್ಳಿ, ಹೊಳೆನರಸೀಪುರ ಮಾರ್ಗವಾಗಿ ಇದೇ 31ರಂದು ಕೊಡಗಿನಲ್ಲಿರುವ ಸೈನಿಕ ಶಾಲೆಗೆ ತಲುಪಲಾಗುವುದು ಎಂದು ಬಿಸ್ವಾಸ್ ಇದೇ ಸಂದರ್ಭ ತಿಳಿಸಿದರು.

ADVERTISEMENT

‘ಮಾರ್ಗ ಮಧ್ಯದಲ್ಲಿನ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಕೆಲ ಸಮಯ ಕಳೆದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವೆ. ದೇಶ ಸೇವೆಯ ಪವಿತ್ರ ಕಾರ್ಯ ನಿರ್ವಹಿಸಲು ಸೈನ್ಯಕ್ಕೆ ಸೇರ್ಪಡೆಯಾಗುವ ಗುರಿ ಹೊಂದಿ.

ಇದು ಪುಣ್ಯದ ಕಾಯಕ. ದೇಶ ರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಲು ಪ್ರತಿಯೊಬ್ಬರು ಇಂದಿನಿಂದಲೇ ಕನಸು ಕಾಣಿ. ದೇಶದ ಹೆಮ್ಮೆಯ ಪ್ರತೀಕವಾಗಿರುವ ಸೈನಿಕ ಶಾಲೆಗಳಿಗೆ ಸೇರ್ಪಡೆಯಾಗಿ ಎಂಬ ಸಂದೇಶವನ್ನು ಈ ಸಂದರ್ಭ ನೀಡುವೆ. ಇದರ ಜತೆಗೆ ಸೈನ್ಯದ ವಿವಿಧ ಸೇವೆಗಳ ಕುರಿತು ಉಪನ್ಯಾಸ ಮಂಡಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸುವೆ’ ಎಂದು ಬಿಸ್ವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.