ವಿಜಯಪುರ: ‘ನಗರದ ಕೊಳಚೆ ನೀರು ನಮ್ಮೂರ ಬಳಿಯ ಕೆರೆ ಸೇರಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಯಾಗಿದೆ. ಹೀಗಾಗಿ ಕೃಷ್ಣೆಯ ನೀರು ಪೂರೈಸಿ’ ಎಂದು ಹಂಚನಾಳ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಮುಮ್ಮಟ್ಟಿಗುಡ್ಡದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿದ ಹಂಚನಾಳ ಗ್ರಾಮಸ್ಥರು, ‘ಹಂಚನಾಳ ಕೆರೆ ಕಾಲುವೆ ದುರಸ್ತಿಗೊಳಿಸಬೇಕು. ತಾಂಡಾ ನಂ. 1ರ ಎರಡು ಶಾಲಾ ಕೊಠಡಿ, ತಾಂಡಾ ನಂ. 2ರ ನಾಲ್ಕು ಕೊಠಡಿಗಳನ್ನು ದುರಸ್ತಿಗೊಳಿಸುವ ಜತೆ ಒಂದು ಹೊಸ ಕೊಠಡಿ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.
‘ಹೊಸ ಅಂಗನವಾಡಿ ಮಂಜೂರು ಮಾಡಿಸಬೇಕು. ಬೈಪಾಸ್ನಿಂಡ ರೈಲ್ವೆ ಗೇಟ್ವರೆಗೆ ರಸ್ತೆಯನ್ನು ಮರು ಡಾಂಬರೀಕರಣಗೊಳಿಸಬೇಕು. ಗ್ರಾಮದ ವಿವಿಧ ದೇವಸ್ಥಾನಗಳಿಗೆ ಅನುದಾನ ನೀಡಬೇಕು’ ಸಚಿವರ ಬಳಿ ಬೇಡಿಕೆಗಳ ಪಟ್ಟಿ ಮಂಡಿಸಿದರು.
ಗ್ರಾಮಸ್ಥರ ಬೇಡಿಕೆ ಆಲಿಸಿದ ಸಚಿವ ಎಂ.ಬಿ.ಪಾಟೀಲ ದೂರವಾಣಿಯಲ್ಲಿ ಪಾಲಿಕೆ ಆಯುಕ್ತರನ್ನು ಸಂಪರ್ಕಿಸಿ ‘ವಿಜಯಪುರ ಕುಡಿಯುವ ನೀರಿನ ಯೋಜನೆಯನ್ನು ಹಂಚನಾಳ ಹಾಗೂ ತಾಂಡಾಗಳಿಗೆ ವಿಸ್ತರಿಸಿದರೆ, ಅದಕ್ಕೆ ತಗಲುವ ₹ 35 ಲಕ್ಷ ಮೊತ್ತವನ್ನು ಜಲಸಂಪನ್ಮೂಲ ಇಲಾಖೆಯ ಎಸ್ಸಿಪಿ ಅನುದಾನದಲ್ಲಿ ಒದಗಿಸಲಾಗುವುದು. ಕೂಡಲೇ ಈ ಕುರಿತು ಕ್ರಮ ಜರುಗಿಸಿ’ ಎಂದು ಸೂಚಿಸಿದರು.
ಹುಬನೂರ ಗ್ರಾಮಸ್ಥರು ಮನವಿ ಸಲ್ಲಿಸಿ ಗ್ರಾಮದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಲು ನಿವೇಶನ ಮಂಜೂರು ಮಾಡಿಸಬೇಕು. ಮುಸ್ಲಿಂ ಸಮುದಾಯ ಭವನ, ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಸಬೇಕು, ಸನದಿ ವಸ್ತಿಗೆ ರಸ್ತೆ ನಿರ್ಮಿಸಬೇಕು. ಬೀರಲಿಂಗೇಶ್ವರ ಸಮುದಾಯ ಭವನಕ್ಕೆ ಅನುದಾನ ನೀಡಬೇಕು. ಹುಬನೂರ-ದಿಂದ ಮಹಾರಾಷ್ಟ್ರ ಗಡಿವರೆಗೆ ರಸ್ತೆ ನಿರ್ಮಿಸಬೇಕು.
ಠೇವು ನಾಯ್ಕ್ ವಸ್ತಿಗೆ ಓವರ್ಹೆಡ್ ಟ್ಯಾಂಕ್ ನಿರ್ಮಿಸಬೇಕು ಎಂಬ ಬೇಡಿಕೆ ಸಲ್ಲಿಸಿದರು. ಟಕ್ಕಳಕಿ, ಬರಟಗಿ, ಅರಕೇರಿ, ಸಿದ್ದಾಪುರ, ಜಾಲಗೇರಿ, ಯತ್ನಾಳ, ಲೋಹಗಾಂವ, ಇಟ್ಟಂಗಿಹಾಳ ಗ್ರಾಮಸ್ಥರು ಹಾಗೂ ತಾಂಡಾ, ವಸ್ತಿ ಜನರು ವಿವಿಧ ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಿದರು.
ಪ್ರತಿ ಗ್ರಾಮಸ್ಥರೊಂದಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ ಸಚಿವ ಎಂ.ಬಿ.ಪಾಟೀಲ, ಸಣ್ಣ ಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
***
ಬಬಲೇಶ್ವರ ವಿಧಾನಸಭಾ ಕ್ಷೇತ್ರದ 7 ಜಿ.ಪಂ. ಕ್ಷೇತ್ರಗಳಲ್ಲಿ ನಡೆಸಿದ ಜನಸಂಪರ್ಕ ಸಭೆಗಳ ಒಟ್ಟು ದೂರು ಕ್ರೋಢೀಕರಿಸಿ, 1 ತಿಂಗಳ ಒಳಗಾಗಿ ಇತ್ಯರ್ಥ ಪಡಿಸಿ
ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.