ADVERTISEMENT

ಹೋರಾಟದಿಂದ ಮಾತ್ರ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 5:55 IST
Last Updated 25 ಜನವರಿ 2012, 5:55 IST

ಇಂಡಿ: ಜನ ಪ್ರತಿನಿಧಿಗಳು ತಮ್ಮ ಮತಕ್ಷೇತ್ರಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಶಾಸಕ ಡಾ. ಸಾರ್ವಭೌಮ ಬಗಲಿ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ತಾಲ್ಲೂಕಿನ ಹಂಜಗಿ- ಚವಡಿಹಾಳ ಗ್ರಾಮಗಳ ನಡುವಿನ ಹಳ್ಳಕ್ಕೆ ನಿರ್ಮಿಸುತ್ತಿರುವ ಸೇತುವೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಭಾಗದ ಜಿ.ಪಂ. ಸದಸ್ಯೆ ಪದ್ಮಾವತಿ ಪಾಟೀಲ ಅವರ ಹೋರಾಟದಿಂದಾಗಿ ಅವರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಸೇತುವೆ ನಿರ್ಮಾಣಕ್ಕೂ ಮಾನ್ಯತೆ ಸಿಕ್ಕಿದೆ. ಸೇತುವೆಗೆ ರೂ 5 ಲಕ್ಷ ಮಂಜೂರಾಗಿದೆ ಎಂದರು.

ಪ್ರಸ್ತುತ ಸೇತುವೆ ನಿರ್ಮಾಣದಿಂದ ಹಂಜಗಿ ಮತ್ತು ಚವಡಿಹಾಳ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಹಲವು ಸಮಸ್ಯೆಗೆ ಪರಿಹಾರ ಸಿಕ್ಕಂತಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಮುರಗುಂಡಿ, ಸಿದ್ಧು ಡಂಗಾ, ಮುಲ್ಲಾ, ಮಠಪತಿ, ಪ್ರಕಾಶ ಪೋತೆ, ಇಸ್ಮಾಯಿಲ್ ಪಾಂಡು, ಬಿ.ಬಿ. ಬಿರಾದಾರ, ಸಿದ್ಧಾರೂಢ ಬಿರಾದಾರ, ಸಂಜೀವ ಮಲ್ಲಾಡಿ, ಎಂ.ಸಿ. ಮೆಟಗುಡ್ಡ, ಶರಣು ಕೊಟ್ಟಲಗಿ, ಬಸವರಾಜ ಕವಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.