ADVERTISEMENT

‘ಜಿಲ್ಲಾ ನಾಯಕರ ಅಣತಿಯಂತೆ ಎಂಪಿ ಟಿಕೆಟ್‌’

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:34 IST
Last Updated 19 ಡಿಸೆಂಬರ್ 2013, 5:34 IST

ವಿಜಾಪುರ: ‘ಕಾಂಗ್ರೆಸ್‌ ಪಕ್ಷದ ಜಿಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಚುನಾವಣೆಗೂ ಮುನ್ನವೇ ಪಕ್ಷದಲ್ಲಿಯ ಗುಂಪುಗಳನ್ನು ಒಗ್ಗೂಡಿಸಬೇಕು ಎಂದು ಚುನಾವಣಾ ಸಮಿತಿ ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಇದಕ್ಕೆ ಮುಖಂಡರೂ ಸಹಮತ ವ್ಯಕ್ತಪಡಿಸಿ ದ್ದಾರೆ’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದರು.

‘ಮುಖ್ಯಮಂತ್ರಿಗಳು ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಜಿಲ್ಲಾ ನಾಯಕರೊಂದಿಗೆ ಸಭೆ ನಡೆಸಿ ಚರ್ಚಿ ಸಬೇಕು. ಟಿಕೆಟ್‌ ಹಂಚಿಕೆಗೂ ಮುನ್ನವೇ ಜಿಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡರೆ ಅವರ ಜವಾಬ್ದಾರಿಯೂ ಹೆಚ್ಚುತ್ತದೆ ಮತ್ತು ಅಭ್ಯರ್ಥಿಗಳ ಆಯ್ಕೆಗೆ ನೆರವಾಗುತ್ತದೆ’ ಎಂದು ಬುಧ ವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಕ್ಷದಲ್ಲಿರುವ ಗುಂಪುಗಾರಿಕೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಹೊಂದಾಣಿಕೆ ಮಾಡಬೇಕು. ಇಲ್ಲ ದಿದ್ದರೆ ಚುನಾವಣೆಯ ಫಲಿತಾಂಶದ ಮೇಲೆ ಹೊಡೆತ ಬೀಳಲಿದೆ’ ಎಂದರು.

‘ಸೋತ ಅಭ್ಯರ್ಥಿಗೆ ಟಿಕೆಟ್‌ ಕೊಡಬಾರದು ಎಂಬ ನಿಯಮ ಇಲ್ಲ. ಇಲ್ಲಿ ಸೋಲು ಮುಖ್ಯವಾಗುವುದಿಲ್ಲ. ಅಭ್ಯರ್ಥಿ ಸರಿ ಇರಬೇಕು. ಅಪರಾಧ ಹಿನ್ನೆಲೆ ಇರಕೂಡದು. ಪಕ್ಷದ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿರಬೇಕು. ಅವರಿಗೆ ಟಿಕೆಟ್‌ ನೀಡಬೇಕು ಎಂಬುದು ಪಕ್ಷದ ಚಿಂತನೆಯಾಗಿದೆ’ ಎಂದು ಹೇಳಿದರು.

‘ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿಲ್ಲ. ಟಿಕೆಟ್‌ ಕೋರಿ ಅರ್ಜಿಯನ್ನೂ ಸಲ್ಲಿಸಿಲ್ಲ. ನನ್ನನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸ ಬೇಕು ಎಂಬುದು ಪಕ್ಷದ ಹೈಕ ಮಾಂಡ್‌ಗೆ ಗೊತ್ತಿದೆ. ಹೈಕಮಾಂಡ್‌ನ ಅಣತಿಯಂತೆ ನಡೆದುಕೊಳ್ಳುವೆ’ ಎಂದು ಪ್ರತಿಕ್ರಿಯಿಸಿದರು.

‘ನರೇಂದ್ರ ಮೋದಿ ಅಲೆ ಬಿಜೆಪಿ ಕಾರ್ಯಕರ್ತರಲ್ಲಿ ಮಾತ್ರ ಇದೆ. ಹೊಸ ಹಿರೋ ಬಂದ ನಂತರ ಸಿನಿಮಾ ಓಡುತ್ತದೆ ಎಂದು ಅವರು ತಿಳಿದಿದ್ದಾರೆ. ಅದೆಲ್ಲ ಕೆಲಸ ಮಾಡದು. ಕೇಂದ್ರದಲ್ಲಿ ಯಾವುದೇ ಸರ್ಕಾರ ಬರಲಿ. ರಾಜ್ಯ ಸರ್ಕಾರದ ಕಾರ್ಯವೈಖರಿ ಗಮನಿಸಿ ಮತ ನೀಡಬೇಕು’ ಎಂದು ಮತದಾ ರರಿಗೆ ಮನವಿ ಮಾಡಿದರು.

ಸಜ್ಜನ ಸರ್ಕಾರ: ‘ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು’ ಎಂಬ ಧ್ಯೇಯದೊಂದಿಗೆ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ದಲ್ಲಿರುವುದು ಸಜ್ಜನರ ಸರ್ಕಾರ. ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ಹಸಿವು ಮುಕ್ತ–ಭೀತಿ ಮುಕ್ತ, ಸರಳ–ಸಜ್ಜನಿ ಕೆಯ ಸರ್ಕಾರ ಕೊಡುವ ಸಂಕಲ್ಪ ದೊಂದಿಗೆ ಮುಂದೆ ಸಾಗುತ್ತಿದ್ದಾರೆ. ಐದಾರು ವರ್ಷಗಳಿಂದ ಹಳಿ ತಪ್ಪಿದ್ದ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತಂದಿದ್ದಾರೆ. ಏಳು ತಿಂಗಳಲ್ಲಿ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದರ ಜೊತೆಗೆ ಜನತೆಗೆ ನೀಡಿದ್ದ ಭರವಸೆಗಳಲ್ಲಿ ಶೇ.40ರಷ್ಟನ್ನು ಈಡೇರಿಸಿದ್ದಾರೆ ಎಂದರು.

ರಾಜ್ಯ ಸರ್ಕಾರದ ಏಳು ತಿಂಗಳ ಆಡಳಿತ ಸಂಪೂರ್ಣ ತೃಪ್ತಿ ತರದಿದ್ದರೂ, ಸಂತೃಪ್ತಿ ಇದೆ ಎಂದು ಜನ ಹೇಳುತ್ತಿ ದ್ದಾರೆ. ಸರ್ಕಾರ ಕೆಲವೇ ವರ್ಗಗಳಿಗೆ ಸೀಮಿತವಾಗಿದೆ ಎಂದು ವಿರೋಧ ಪಕ್ಷ ದವರು ಅಪಪ್ರಚಾರ ಮಾಡುತ್ತಿದ್ದಾರೆ. ಜಾತಿ ಸಂಘರ್ಷಕ್ಕೆ ಅವಕಾಶ ನೀಡದೆ ರಾಜ್ಯದ ಅಭಿವೃದ್ಧಿಗೆ ಸಲಹೆ ನೀಡಬೇಕು ಎಂದರು.

‘ಕಾಂಗ್ರೆಸ್‌ ಕೋರ್‌ ಕಮೀಟಿ ಸದ ಸ್ಯರ ಸಂಖ್ಯೆ ಹೆಚ್ಚಿಸಿ, ಇನ್ನಷ್ಟು ಜನ ಮುಖಂಡರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಬಯಕೆ. ಇದನ್ನು ಪಕ್ಷದ ಹೈಕಮಾಂಡ್‌ಗೂ ತಿಳಿಸಿದ್ದೇವೆ’ ಎಂದರು.

ಯುಜಿಸಿ ವೇತನ: ‘ಎಲ್‌ಕೆಜಿ ಶುಲ್ಕ ದಷ್ಟೇ ಎಂಜಿನಿಯರಿಂಗ್‌ ಕಾಲೇಜಿನ ಶುಲ್ಕ ಇಡಿ ಎಂದರೆ ಆಗಲ್ಲ. ಕಾಲೇಜು ಗಳ ಬೋಧಕರಿಗೂ ಯುಜಿಸಿ ಸರಿಸಮ ನಾದ ವೇತನ ಶ್ರೇಣಿ ದೊರೆಯಬೇಕು ಎಂಬುದು ಸರ್ಕಾರದ ಚಿಂತನೆ. ಅದಕ್ಕೆ ವೃತ್ತಿಪರ ಕೋರ್ಸ್‌ಗಳ ಶುಲ್ಕ ಹೆಚ್ಚಳ ಅನಿವಾರ್ಯ. ಸಿಇಟಿ ವಿವಾದವನ್ನು ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಅವರು ಎಲ್ಲರೊಂದಿಗೆ ಚರ್ಚಿಸಿ ಪರಿಹರಿಸಲಿದ್ದಾರೆ’ ಎಂದು ಇಬ್ರಾಹಿಂ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯ ದರ್ಶಿ ಎಸ್‌.ಎಂ. ಪಾಟೀಲ ಗಣಿಹಾರ, ಕರ್ನಾಟಕ ಮುಸ್ಲಿಂ ಕೌನ್ಸಿಲ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ ಇತರರು ಪತ್ರಿಕಾ ಗೋಷ್ಠಿಯಲ್ಲಿದ್ದರು.

‘ಸಿಂದಗಿ ಘಟನೆ ಸಣ್ಣದು’

ಟಿಪ್ಪು ಸುಲ್ತಾನ್‌ ಜಯಂತ್ಯುತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಸಿಂದಗಿ ಯಲ್ಲಿ ನಡೆದದ್ದು ಸಣ್ಣ ಘಟನೆ. ಆದರೆ, ಅದನ್ನು ದೊಡ್ಡದಾಗಿ ಬಿಂಬಿಸಲಾಗಿದೆ ಎಂದು ಸಿ.ಎಂ. ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮುಸ್ಲಿಂರಿಗಿಂತ ಅನ್ಯ ಧರ್ಮದವರು ಹೆಚ್ಚಾಗಿ ಪಾಲ್ಗೊಂಡಿದ್ದರು. ‘ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಣ ಲಾರದ ಕಡೆಯಿಂದ ಕಲ್ಲು ಬರುತ್ತವೆ. ಮತಕ್ಕಾಗಿ ಸಮಾಜದಲ್ಲಿ ಕಲಹ ಸೃಷ್ಟಿ ಬೇಡ. ಕೂಡಿ ಬಾಳುವ ರಾಜಕಾರಣಕ್ಕೆ ಆದ್ಯತೆ ನೀಡಿ’ ಎಂದು ಯಾರ ಹೆಸರು ಪ್ರಸ್ತಾಪಿಸದೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT