ADVERTISEMENT

‘ಕುಡಿಯುವ ನೀರಿನ ಕಾಮಗಾರಿ; ₹2.10 ಕೋಟಿ ಮಂಜೂರು’

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 14:16 IST
Last Updated 22 ಜೂನ್ 2019, 14:16 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಕುಡಿಯುವ ನೀರಿನ ಕಾಮಗಾರಿಗಾಗಿ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪಯೋಜನೆ (ಟಿಎಸ್‌ಪಿ) ಅಡಿಯಲ್ಲಿ ವಿಜಯಪುರ ನಗರ ಮತಕ್ಷೇತ್ರಕ್ಕೆ ₹2.10 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

‘ವಿಜಯಪುರ ಮತಕ್ಷೇತ್ರ ವ್ಯಾಪ್ತಿಯ ತೊರವಿ ಗ್ರಾಮ ಹಾಗೂ ತೊರವಿ ತಾಂಡಾ (ನಂ.1,2,3,4)ಗಳಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ತೀವ್ರ ನೀರಿನ ಅಭಾವ ಉಂಟಾಗುತ್ತದೆ. ಇಲ್ಲಿಯವರೆಗೆ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ತೊರವಿ ಗ್ರಾಮ ಹಾಗೂ ತಾಂಡಾ ನಂ.1ರಲ್ಲಿ ಮೇಲ್ಭಾಗದ ಟ್ಯಾಂಕ್ ಹಾಗೂ ನೀರಿನ ಪೈಪ್‌ಲೈನ್‌ ಕಾಮಗಾರಿ, ತೊರವಿ ತಾಂಡಾ ನಂ. 2,3,4ರಲ್ಲಿ ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳಲಾಗುವುದು. ಜತೆಗೆ ಕೆಲವು ಕಡೆ ಕೊಳವೆ ಬಾವಿಗಳನ್ನು ಕೊರೆಸಿ, ನೀರು ಒದಗಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಪರಿಹಾರ ಬಳಿಕ ಮಾಸ್ಟರ್ ಪ್ಲಾನ್ ಕೈಗೆತ್ತಿಕೊಳ್ಳಿ’

ADVERTISEMENT

ವಿಜಯಪುರ: ‘ನಗರದ ಕೆಲವೆಡೆ ಬಾಕಿ ಉಳಿದಿರುವ ಮಾಸ್ಟರ್ ಪ್ಲಾನ್ ಕಾರ್ಯಾಚರಣೆಯನ್ನು ಆರಂಭಿಸುವ ಮುನ್ನ, ಆಸ್ತಿಯ ಮಾಲೀಕರಿಗೆ ಯೋಗ್ಯ ಪರಿಹಾರ ನೀಡಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.

‘ಪರಿಹಾರ ಮೊತ್ತವು ಜಿಲ್ಲಾಧಿಕಾರಿ ಖಾತೆಗೆ ಬಂದ ನಂತರವೇ ಕ್ರಮ ಕೈಗೊಳ್ಳಬೇಕು. ಯಾವುದೇ ರಾಜಕಾರಣಿಗಳ ಅಥವಾ ಸಚಿವರ ಒತ್ತಡಕ್ಕೆ ಮಣಿಯಬಾರದು. ಪಾರದರ್ಶಕವಾಗಿ, ನ್ಯಾಯೋಚಿತವಾಗಿ, ತಾರತಮ್ಯವೆಸಗದೇ ಭೂಮಾಪನ ಮಾಡಿಸಬೇಕು. ಯಾರಿಗೋ ಅನುಕೂಲವಾಗುವ ರೀತಿಯಲ್ಲಿ ತಾರತಮ್ಯವೆಸಗಿದಲ್ಲಿ ಅದಕ್ಕೆ ನನ್ನ ಒಪ್ಪಿಗೆ ಇರುವುದಿಲ್ಲ ಮತ್ತು ಅದನ್ನು ತೀವ್ರವಾಗಿ ವಿರೋಧಿಸುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.