ADVERTISEMENT

ಇಂಡಿಗೆ ₹ 3500 ಕೋಟಿ ಅನುದಾನ: ಯಶವಂತರಾಯಗೌಡ 

ಜಿಲ್ಲೆ ಮಾಡುವ ಭರವಸೆ ನೀಡುವೆ; ಆಳಾಗಿ ದುಡಿದು ಲೆಕ್ಕ ಕೊಟ್ಟಿರುವೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 14:12 IST
Last Updated 26 ಮಾರ್ಚ್ 2023, 14:12 IST
ಇಂಡಿ ತಾಲ್ಲೂಕಿನ ಸಾತಲಗಾಂವ ಗ್ರಾಮದಲ್ಲಿ  ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು
ಇಂಡಿ ತಾಲ್ಲೂಕಿನ ಸಾತಲಗಾಂವ ಗ್ರಾಮದಲ್ಲಿ  ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು   

ಇಂಡಿ: ಇಂಡಿ ಕ್ಷೇತ್ರದ ಮತದಾರರು ನನ್ನ ಮೇಲೆ ಭರವಸೆಯಿಟ್ಟು ಗೆಲ್ಲಿಸಿದಕ್ಕಾಗಿ 10 ವರ್ಷದ ಅವಧಿಯಲ್ಲಿ ನಿಮ್ಮ ಮನೆಯ ಆಳಾಗಿ ದುಡಿದು ₹ 3500 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದು, ದುಡಿದು ಸಂಪೂರ್ಣ ಲೆಕ್ಕ ನೀಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಸಾತಲಗಾಂವ ಗ್ರಾಮದಲ್ಲಿ ಮಂಜುನಾಥ ಕಾಮಗೊಂಡ ಅವರ ನೇತೃತ್ವದಲ್ಲಿ ಜೆಡಿಎಸ್ ತೊರೆದು ಸುಮಾರು 750ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ನಿಂತ ನೀರಲ್ಲ, ಹರಿಯುವ ನೀರು. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಇನ್ನೂ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿವೆ. ಇಂಡಿ ಜಿಲ್ಲೆಯನ್ನಾಗಿ ಮಾಡುವುದು, ತಾಲ್ಲೂಕಿನ ರೇವಣ ಸಿದ್ದೇಶ್ವರ ಏತ ನೀರಾವರಿಯಿಂದ ರೈತರ ಹೊಲಗಳಿಗೆ ನೀರು ಹರಿಸಬೇಕಾಗಿದೆ. ಇನ್ನು ಹಲವು ಕೆಲಸಗಳು ಆಗಬೇಕಿದ್ದು, ಮುಂದೆ ನಮ್ಮದೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮಾಡುವ ಭರವಸೆ ನೀಡಿದರು.

ADVERTISEMENT

ಜಿಲ್ಲೆಗೆ ಬರಬೇಕಾದ 80 ಟಿಎಂಸಿ ನೀರನ್ನು ಉಪಯೋಗಿಸಲು ಮುಂದಿನ ದಿನಗಳಲ್ಲಿ ಪ್ರತಿವರ್ಷ ₹ 40 ಕೋಟಿ ಅನುದಾನ ನೀಡುವ ಭರವಸೆ ಕಾಂಗ್ರೆಸ್ ಪಕ್ಷ ನೀಡುತ್ತಿದೆ. ಅದರಂತೆ ಮನೆಯ ಹಿರಿಯ ಮಹಿಳೆಗೆ ಪ್ರತಿ ತಿಂಗಳು ₹ 2000, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ನಿರುದ್ಯೋಗಿ ಯುವಕರಿಗೆ ₹ 3000 ಭತ್ಯೆ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕ್ಷೇತ್ರದ ಜನರು ನನ್ನ ಕೆಲಸಕ್ಕೆ ಕೂಲಿ ನೀಡಬೇಕಾಗಿದೆ. ಚುನಾವಣೆಯಲ್ಲಿ ನನಗೆ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜಿ.ಪಂ ಮಾಜಿ ಸದಸ್ಯ ಮಂಜುನಾಥ ಕಾಮಗೊಂಡ ಮಾತನಾಡಿ, ಜೀವನದಲ್ಲಿ ನೊಂದು ಬಂದವರಿಗೆ ನೆರಳು ನೀಡಿದ ಶಾಸಕ ಯಶವಂತಗೌಡರು ಸರಳ ಸ್ವಭಾವದ ನಾಯಕರಾಗಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಕಾರ್ಯ ಮೆಚ್ಚಿ ನಾವು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ ಎಂದರು.

ಮುಖಂಡರಾದ ಎಂ.ಆರ್.ಪಾಟೀಲ, ಡಾ. ಸಂದೀಪ ಪಾಟೀಲ, ಸಂತೋಷ ವಾಲಿಕಾರ ಮಾತನಾಡಿದರು.

ಗ್ರಾಮದ ಹಿರಿಯರಾದ ಗೌಡಪ್ಪಗೌಡ ಪಾಟೀಲ ಇವರನ್ನು ನಿಂಬೆಯಿಂದ ತುಲಾಭಾರ ಮಾಡಿದರು.

ಮುಖಂಡರಾದ ಸತ್ತಾರ ಬಾಗವಾನ, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟಿಲ, ಜಾವೇದ ಮೋಮಿನ, ಜಟ್ಟೆಪ್ಪ ರವಳಿ ಇದ್ದರು. ಸುಮಾರು 750 ಕ್ಕೂ ಹೆಚ್ಚು ಜೆಡಿ ಎಸ್ ಮತ್ತು ವಿವಿಧ ಪಕ್ಷದ ಕಾರ್ಯಕರ್ತರು ಮಂಜುನಾಥ ಕಾಮಗೊಂಡ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.