ADVERTISEMENT

ಉ.ಕ.ಅಭಿವೃದ್ಧಿಗೆ ‘ಜೆಎಸ್‌ಪಿ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 7:07 IST
Last Updated 12 ಜನವರಿ 2018, 7:07 IST

ವಿಜಯಪುರ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುವ ಮಹತ್ತರ ಉದ್ದೇಶದಿಂದ ಜನ ಸಾಮಾನ್ಯರ ಪಕ್ಷ (ಕರ್ನಾಟಕ) ಸ್ಥಾಪಿಸಲಾಗಿದೆ ಎಂದು ಸಂಸ್ಥಾಪಕ ಡಾ.ಅಯ್ಯಪ್ಪ ಹೇಳಿದರು. ನಗರದಲ್ಲಿ ಗುರುವಾರ ಜನ ಸಾಮಾನ್ಯರ ಪಕ್ಷ (ಕರ್ನಾಟಕ)ದ ಪ್ರಚಾರಕ್ಕಾಗಿ ಹಮ್ಮಿಕೊಂಡ ಬಸವ ರಥಯಾತ್ರೆಗೆ ಚಾಲನೆ ನೀಡಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಿರಂತರವಾಗಿ ಅನ್ಯಾಯ ಮಾಡುತ್ತ ಬಂದಿರುವ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ಗೆ ಚುನಾವಣೆ ಬಂದಾಗ ಮಾತ್ರ ಉತ್ತರ ಕರ್ನಾಟಕ ನೆನಪಾಗುತ್ತದೆ. ಕಳಸಾ ಬಂಡೂರಿ ಮಹದಾಯಿ ಸಮಸ್ಯೆ ಯನ್ನು ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಂಡಿವೆ ವಿನ, ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಿಲ್ಲ. ಇದಕ್ಕೆ ಅಂತ್ಯ ಹಾಡಲೆಂದೇ ರೈತರು ಮತ್ತು ಜನಸಾಮಾನ್ಯರು ಸೇರಿ ‘ಜನ ಸಾಮಾನ್ಯರ ಪಕ್ಷ’ ಕಟ್ಟಿದ್ದೇವೆ ಎಂದು ತಿಳಿಸಿದರು.

‘100 ಮತಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ಐದಾರು ಆಕಾಂಕ್ಷಿಗಳಿದ್ದಾರೆ. ಜೊತೆಗೆ ಬಿಜೆಪಿ ಹಾಲಿ ಎಂಟು ಶಾಸಕರು ತಮ್ಮ ಪಕ್ಷದೊಳಗಿನ ಬೆಳವಣಿಗೆ ಬೇಸತ್ತು ನಮ್ಮ ಪಕ್ಷ ಸೇರುವ ಸುಳಿವು ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಮುಂದಿನ ಚುನಾವಣೆಯಲ್ಲಿ ರೈತರು ಮತ್ತು ಜನಸಾಮಾನ್ಯರೇ ಸರ್ಕಾರ ರಚಿಸುವಲ್ಲಿ ನಿರ್ಣಾಯಕರಾಗಬೇಕು. ಈ ಭಾಗದಲ್ಲಿ ಸಂಪೂರ್ಣ ನೀರಾವರಿ ಕಾಣಬೇಕು ಎಂಬುವುದು ನಮ್ಮ ಉದ್ದೇಶ. ಜ.15 ರಂದು ಕೂಡಲ ಸಂಗಮದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಚಾಲನೆಗೊಳ್ಳಲಿದ್ದು, 75 ರಿಂದ 1 ಲಕ್ಷ ಜನ ಸೇರುವ ನಿರೀಕ್ಷೆವ ಇದೆ’ ಎಂದರು.

ಕಾಮಗಾರಿಗೆ ₹ 20 ಕೋಟಿ: ‘ಕಳಸಾ ಬಂಡೂರಿ ಮೂಲಕ ಮಲಪ್ರಭೆಗೆ ಮಹದಾಯಿ ನೀರು ಹರಿಸುವ ಬಾಕಿ ಉಳಿದ ನಾಲೆ ಕಾಮಗಾರಿಗಳಿಗೆ₹ 50 ಕೋಟಿ ಖರ್ಚಾಗಲಿದ್ದು, ಜನ ಸಾಮಾನ್ಯರ ಪಕ್ಷ ರೈತರೊಂದಿಗೆ ಕರಸೇವೆ ಮೂಲಕ ಮಾಡಲು ನಿರ್ಧರಿಸಿದಲ್ಲದೇ, ಪಕ್ಷದಿಂದ ₹ 20 ಕೋಟಿ ದೇಣಿಗೆ ನೀಡಲಾಗುವುದು. ಉಳಿದ ಮೊತ್ತವನ್ನು ರೈತರ ಮನೆ ಮನೆಯಿಂದ ₹ 100 ದೇಣಿಗೆ ಮತ್ತು ಒಂದು ರೊಟ್ಟಿ ಸಂಗ್ರಹಿ ಸಲಾಗುವುದು’ ಎಂದು ತಿಳಿಸಿದರು.

ಈಗಾಗಲೇ 2 ಸಾವಿರ ಜೆಸಿಬಿ, ಜಲ್ಲಿಕಲ್ಲು, ಸಿಮೆಂಟ್, ಕಬ್ಬಿಣ ಕೊಡಿಸಲು ರೈತರು ಸೇರಿದಂತೆ ಜನ ಸಾಮಾನ್ಯರು ಮುಂದೆ ಬಂದಿದ್ದಾರೆ. ಕಾಮಗಾರಿಗೆ ಅನುಮತಿ ಕೋರಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು. ನಾಗರಾಜ ಹೊಂಗಲ, ಬಾಬು ಬಿರಾದಾರ, ಬಸವರಾಜ ಸುಕಾಲಿ, ಯಲ್ಲಪ್ಪ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.