ADVERTISEMENT

‘ದಾಳಿಂಬೆ ಉತ್ಪಾದನೆ: ಸೊಲ್ಲಾಪುರ ಜಿಲ್ಲೆಗೆ ಅಗ್ರಸ್ಥಾನ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 12:44 IST
Last Updated 18 ಜನವರಿ 2018, 12:44 IST

ಸೊಲ್ಲಾಪುರ: ದಾಳಿಂಬೆ ಉತ್ಪಾದನೆಯಲ್ಲಿ ಸೊಲ್ಲಾಪುರ ಜಿಲ್ಲೆ ಅಗ್ರಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಡಾಳಿಂಬೆ ಸಂಶೋಧನೆ ಕೇಂದ್ರದ ಡಾ.ನೀಲೇಶ ಗಾಯಕವಾಡ ಹೇಳಿದರು.

ನಗರದ ಹೋಮ ಮೈದಾನದಲ್ಲಿ ಈಚೆಗೆ ನಡೆದ ಸಿದ್ಧೇಶ್ವರ ಕೃಷಿ ಪ್ರದರ್ಶನ ದಲ್ಲಿ ದಾಳಿಂಬೆ ಬೆಳೆ ಉತ್ಪಾದನೆ ಹಾಗೂ ಉದ್ಯೋಗ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ‘ಕಳೆದ ಇಪ್ಪತ್ತು ವರ್ಷಗಳಲ್ಲಿ ದಾಳಿಂಬೆ ಉತ್ಪಾದನೆಯಲ್ಲಿ ಕ್ರಾಂತಿಯಾಗಿದೆ. ಅದು ಆರಂಭ
ಗೊಂಡಿರುವುದು ಸೊಲ್ಲಾಪುರ ಜಿಲ್ಲೆಯಲ್ಲಿ ಎಂಬುವುದು ವಿಶೇಷ’ ಎಂದರು.

ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಎರಡು ಲಕ್ಷ ಟನ್ ದಾಳಿಂಬೆ ಬೆಳೆದರೆ, ಸೊಲ್ಲಾಪುರ ಜಿಲ್ಲೆಯೊಂದರಲ್ಲಿಯೇ 50 ರಿಂದ 60 ಸಾವಿರ ಟನ್ ಬೆಳೆಯಲಾಗುತ್ತದೆ. ಇದೇ ಮೊದಲ ಬಾರಿಗೆ ಜಿಲ್ಲೆಯಿಂದ 18 ಕಂಟೆನರ್ ದಾಳಿಂಬೆ ಯೂರೋಪ್‌ನಲ್ಲಿ ಮಾರಾಟ ಆಗಿರುವುದು ಖುಷಿಯ ವಿಚಾರ ಎಂದರು.

ADVERTISEMENT

ದಾಳಿಂಬೆ ಹಣ್ಣಿನಿಂದ ಐಸ್ಕ್ರೀಮ್, ಸೌಂದರ್ಯ ವರ್ಧಕಗಳು, ಎಣ್ಣೆ, ಜ್ಯೂಸ್, ವೈನ್‌ ಹೀಗೆ ಹಲವಾರು ರೀತಿಯ ಪದಾರ್ಥಗಳನ್ನು ತಯಾರಿಸಲಾಗುತ್ತಿದ್ದು, ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ರೈತರು ದಾಳಿಂಬೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು’ ಎಂದರು.

ಪೊಲೀಸ್ ಆಯುಕ್ತ ಮಹಾದೇವ ತಾಂಬಡೆ ಅಧ್ಯಕ್ಷತೆ ವಹಿಸಿದ್ದರು. ಸಿದ್ದೇಶ್ವರ ಬಮಣಿ, ಆತ್ಮಾ ಪ್ರಕಲ್ಪ, ವಿಜಯಕುಮಾರ ಬರಬರಡೆ, ಶ್ರೀಧರ ಜೋಶಿ, ಸೋಮನಾಥ ಶೇಠೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.