ADVERTISEMENT

‘ಧರ್ಮ ಒಡೆಯುವ ಕಾರ್ಯ ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 7:23 IST
Last Updated 6 ಫೆಬ್ರುವರಿ 2018, 7:23 IST
ಬಸವನಬಾಗೇವಾಡಿ ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ನೂತನ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ಸಮಾರಂಭವನ್ನು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಉದ್ಘಾಟಿಸಿದರು
ಬಸವನಬಾಗೇವಾಡಿ ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ನೂತನ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ಸಮಾರಂಭವನ್ನು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಉದ್ಘಾಟಿಸಿದರು   

ಯಾಳವಾರ (ಬಸವನ ಬಾಗೇವಾಡಿ): ‘ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿ ಮಾಡಿದ್ದಾರೆ. ಆದರೆ ಇಂದು ಕೆಲವರು ಅವರ ಹೆಸರನ್ನು ಹೇಳಿಕೊಂಡು ಅಧರ್ಮದ ಕೆಲಸ ಮಾಡಲು ಹೊರಟಿದ್ದಾರೆ’ ಎಂದು ಶ್ರೀಶೈಲ ಪೀಠಾಧೀಶ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಭಾನುವಾರ ಭ್ರಮರಾಂಬ ಮಲ್ಲಿಕಾರ್ಜುನ ನೂತನ ದೇವಸ್ಥಾನ ಉದ್ಘಾಟನೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ದೀಪಸ್ತಂಭ, ಪಾದಗಟ್ಟಿ ಹಾಗೂ ಭವ್ಯರಥದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವೀರಶೈವ– ಲಿಂಗಾಯತ ಎರಡು ಬೇರೆ ಬೇರೆ ಅಲ್ಲ. ಆದರೆ ಇದರ ಇಬ್ಭಾಗಕ್ಕೆ ಕೆಲವರು ನಿಂತುಕೊಂಡಿದ್ದಾರೆ. ಇದಕ್ಕೆ ಸಮಾಜ ಸೊಪ್ಪು ಹಾಕದೆಯೇ, ಧರ್ಮ ಒಡೆಯುವವರನ್ನೇ ಸಮಾಜದಿಂದ ಹೊರ ಹಾಕುವ ಕಾರ್ಯವನ್ನು ಮಾಡಬೇಕಿದೆ’ ಎಂದರು.

ADVERTISEMENT

‘ಮೂರ್ತಿ ಪೂಜೆ ಸಂಸ್ಕೃತಿಯು ಸನಾತನ ಪರಂಪರೆಯಿಂದ ಬಂದಿದೆ. ಶರಣರು ಮೂರ್ತಿ ಪೂಜೆ ಬೇಡ ಎಂದಿಲ್ಲ. ಆದರೆ ಇಂದು ಕೆಲವರು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳಲು ಮೂರ್ತಿ ಪೂಜೆ ಮಾಡಬೇಡಿ, ವೀರಶೈವ-ಲಿಂಗಾಯತ ಬೇರೆ ಬೇರೆ’ ಎಂದು ಹೇಳುತ್ತಿರುವುದರಲ್ಲಿ ಅರ್ಥವೇ ಇಲ್ಲ. ಜನರು ಜಾಗೃತಿಯಿಂದ ಹೆಜ್ಜೆ ಇಡಬೇಕಿದೆ’ ಎಂದು ಹೇಳಿದರು.

ಕರಿಭಂಟನಾಳ ಹಿರೇಮಠದ ಶಿವಕುಮಾರ ಸ್ವಾಮಿಜಿ ಮಾತನಾಡಿ, ‘ವೀರಶೈವ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಕೆಲ ಸಂಶೋಧಕರು ವೀರಶೈವ- ಲಿಂಗಾಯತ ಬೇರೆ- ಬೇರೆ ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದು ಹೇಳಿದರು. ಬಾಗಕೋಟೆಯ ರಾಮರೂಢ ಮಠದ ರಾಮರೂಢ ಸಮೀಜಿ, ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ, ರವಿ ಕೊಟ್ರಗಸ್ತಿ ಮಾತನಾಡಿದರು.

ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕಾಶೀನಾಥ ಸ್ವಾಮಿಜಿ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಬಿ.ಎಸ್.ಪಾಟೀಲ(ಯಾಳಗಿ), ರಾಜುಗೌಡ ನಾಡಗೌಡ್ರ, ಸಾಹೇಬಗೌಡ ದೊಡಮನಿ, ಆನಂದಗೌಡ ದೊಡಮನಿ, ಎಸ್.ಎಸ್ ಛಾಯಾಗೋಳ, ಬಾಳಾಸಾಹೇಬಗೌಡ ಪಾಟೀಲ, ದೊಡ್ಡಪ್ಪಗೌಡ ಹಾದಿಮನಿ, ಸುರೇಶಗೌಡ ಪಾಟೀಲ, ಎಂ.ಸಿ.ನ್ಯಾಮಣ್ಣವರ, ಪಿ.ಎಸ್. ಪಾಟೀಲ, ಬಾಪುಗೌಡ ಪಾಟೀಲ, ನಾನಾಗೌಡ ಹಾದಿಮನಿ, ಗುರಲಿಂಗಪ್ಪ ಮಾನ್ವಿ, ಗದಗಯ್ಯ ಹಿರೇಮಠ, ಅರವಿಂದ ನಾಗರಾಳ, ಅಪ್ಪಣಗೌಡ ಮೂಲಿಮನಿ, ಸಿದ್ಧರಾಮ ಜಯವಾಡಗಿ, ಸೋಮನಗೌಡ ಕೇಶಟ್ಟಿ ಇತರು ಇದ್ದರು. ಪ್ರೊ.ಶೇಷಾಚಲ ಹವಾಲ್ದಾರ ಸ್ವಾಗತಿಸಿದರು. ಬಿ.ವೈ.ಭಂಟನೂರ, ಎಸ್.ಎಸ್ ತಬ್ಬಣ್ಣವರ ನಿರೂಪಿಸಿದರು. ಐ.ಬಿ.ಹಿರೇಮಠ ವಂದಿಸಿದರು.

* * 

‘ಬಸವಣ್ಣನವರ ವಚನಗಳನ್ನು ಸಂಪೂರ್ಣ ಅಧ್ಯಯನ ಮಾಡದೆಯೇ ತಮಗೆ ಅನುಕೂಲಕ್ಕೆ ಬೇಕಾದಂತಹ ಕೆಲವು ವಚನಗಳನ್ನು ಆಯ್ಕೆ ಮಾಡಿಕೊಂಡು ಧರ್ಮ ಒಡೆಯುವ ಕಾರ್ಯಕ್ಕೆ ಕೆಲವರು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.