ಸಿಂದಗಿ (ವಿಜಯಪುರ): ಪಟ್ಟಣ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಯಂಕಂಚಿ ಬೈಪಾಸ್ರಸ್ತೆಯಲ್ಲಿ ಬುಧವಾರ ಟ್ಯಾಂಕರ್ ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿ 30 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಬಸ್ ಯಡ್ರಾಮಿ–ಮಳ್ಳಿ–ಯಂಕಂಚಿ ಮಾರ್ಗವಾಗಿ ಸಿಂದಗಿಯತ್ತ ಬರುತ್ತಿತ್ತು. ವಿಜಯಪುರದಿಂದ ಕಲಬುರ್ಗಿಗೆ ಹೊರಟಿದ್ದ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ.ವಂದಾಲ ಗ್ರಾಮದ ಶ್ರೀದೇವಿ ಬಿರಾದಾರ, ಸಾಸಬಾಳ ಗ್ರಾಮದ ಶರಣಗೌಡ ಇಂಡಿ ಹಾಗೂ ಬಸ್ ಚಾಲಕ ಸಿದ್ದಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ನಲ್ಲಿ ಗೋಲಗೇರಿ, ಆಲಗೂರ, ಢವಳಾರ, ಮಳ್ಳಿ, ಅಲ್ಲಾಪುರ, ಹುಣಶ್ಯಾಳ ಕಾಚಾಪುರ, ಸುಂಬಡ, ವಂದಾಲ ಮುಂತಾದ ಗ್ರಾಮಗಳ ವಿದ್ಯಾರ್ಥಿಗಳಿದ್ದು, ಇವರೆಲ್ಲರೂ ಬಿ.ಎ ಪರೀಕ್ಷೆಗೆ ಹಾಜರಾಗಲು ಹೊರಟಿದ್ದರು ಎನ್ನಲಾಗಿದೆ.‘ಚಾಲಕ ಯಂಕಂಚಿ ಗ್ರಾಮದಿಂದಲೇ ಅತೀ ವೇಗವಾಗಿ ಬಸ್ ಓಡಿಸುತ್ತಿದ್ದರು. ಸಿಂದಗಿ ಬೈಪಾಸ್ನಲ್ಲಿ ರಸ್ತೆ ಹಂಪ್ ಜಿಗಿಸಿ, ಹೆದ್ದಾರಿಯಲ್ಲಿ ಹೊರಟಿದ್ದ ಟ್ಯಾಂಕರ್ಗೆ ಡಿಕ್ಕಿ ಹೊಡೆಸಿದರು’ ಎಂದು ವಿದ್ಯಾರ್ಥಿ ಹಣಮಂತ ದೊಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ವೇಗವಾಗಿ ಹೋಗುತ್ತಿದ್ದ ಬಸ್ ಇನ್ನೇನು ಟ್ಯಾಂಕರ್ಗೆ ಡಿಕ್ಕಿ ಹೊಡೆಯುತ್ತದೆ ಎಂದು ಕಿರುಚಿಕೊಳ್ಳುವ ಹೊತ್ತಿಗೆ ಟ್ಯಾಂಕರ್ಗೆ ಬಸ್ ಡಿಕ್ಕಿ ಹೊಡೆದಿತ್ತು’ ಎಂದು ವಿದ್ಯಾರ್ಥಿ ಅಹ್ಮದ್ ಪಾಷಾ ಮಕಾಂದಾರ ತಿಳಿಸಿದರು.‘ತಾವು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ’ ಎಂದು ಬಹುತೇಕ ವಿದ್ಯಾರ್ಥಿಗಳು ಅಳುತ್ತಿರುವುದು ಕಂಡುಬಂತು.ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.