ADVERTISEMENT

ನಿಡಗುಂದಿ | ಅಧಿಕಾರ– ಸಾಕಾರ: ಮಹಿಳಾ ಜನಪ್ರತಿನಿಧಿಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:59 IST
Last Updated 31 ಡಿಸೆಂಬರ್ 2025, 4:59 IST
ನಿಡಗುಂದಿ ತಾಲ್ಲೂಕಿನ ಹೆಬ್ಬಾಳ ಗ್ರಾಮ‌ ಪಂಚಾಯಿತಿಗೆ ಮಂಗಳವಾರ ವಿವಿಧ ಗ್ರಾಮ ಪಂಚಾಯಿತಿಗಳ ಮಹಿಳಾ ಚುನಾಯಿತ ಪ್ರತಿನಿಧಿಗಳು ಭೇಟಿ ನೀಡಿ, ತರಬೇತಿಯಲ್ಲಿ ಭಾಗಿಯಾಗಿ ಮಾಹಿತಿ ಪಡೆದುಕೊಂಡರು
ನಿಡಗುಂದಿ ತಾಲ್ಲೂಕಿನ ಹೆಬ್ಬಾಳ ಗ್ರಾಮ‌ ಪಂಚಾಯಿತಿಗೆ ಮಂಗಳವಾರ ವಿವಿಧ ಗ್ರಾಮ ಪಂಚಾಯಿತಿಗಳ ಮಹಿಳಾ ಚುನಾಯಿತ ಪ್ರತಿನಿಧಿಗಳು ಭೇಟಿ ನೀಡಿ, ತರಬೇತಿಯಲ್ಲಿ ಭಾಗಿಯಾಗಿ ಮಾಹಿತಿ ಪಡೆದುಕೊಂಡರು   

ನಿಡಗುಂದಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಅನುಷ್ಠಾನಗೊಳಿಸಿರುವ ‘ಅಧಿಕಾರ– ಸಾಕಾರ’ ಮಹಿಳಾ ಚುನಾಯಿತ ಜನಪ್ರತಿನಿಧಿಗಳಿಗೆ ತರಬೇತಿ ಕಾರ್ಯಕ್ರಮದಡಿ ತಾಲ್ಲೂಕಿನ ಹೆಬ್ಬಾಳ ಗ್ರಾಮ‌ ಪಂಚಾಯಿತಿಗೆ ಮಂಗಳವಾರ ಮುದ್ದೇಬಿಹಾಳ ತಾಲ್ಲೂಕಿನ ಆಲೂರು, ನಾಗರಬೆಟ್ಟ, ರೂಡಗಿ, ಬಸರಕೋಡ ಹಾಗೂ ಕೋಳೂರು ಗ್ರಾಮ ಪಂಚಾಯಿತಿಗಳ ಮಹಿಳಾ ಚುನಾಯಿತ ಪ್ರತಿನಿಧಿಗಳು ಭೇಟಿ ನೀಡಿ, ತರಬೇತಿಯಲ್ಲಿ ಮಾಹಿತಿ ಪಡೆದುಕೊಂಡರು.

ಈ ವೇಳೆ ಹೆಬ್ಬಾಳ ಗ್ರಾ.ಪಂ ಪಿಡಿಒ ವಿರೂಪಾಕ್ಷ ನಾಡಗೌಡ ಮಾತನಾಡಿ, ‘ಹೆಬ್ಬಾಳ ಗ್ರಾಮ ಪಂಚಾಯಿತಿ ತಾಲ್ಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಪಂಚಾಯಿತಿಗಳಲ್ಲಿ ಒಂದಾಗಿದೆ. ಪಂಚಾಯಿತಿ ವ್ಯಾಪ್ತಿಯ ಎರಡೂ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲದೇ ಈಚೆಗೆ ‘ಗಾಂಧಿ ಗ್ರಾಮ ಪುರಸ್ಕಾರ’ ಲಭಿಸಿದೆ. ಕಾಲಕಾಲಕ್ಕೆ ಗ್ರಾಮಸಭೆಗಳನ್ನು ಮಾಡಿ ಗ್ರಾಮಸ್ಥರ ಕುಂದು– ಕೊರತೆಗಳ ಮಾಹಿತಿ ಪಡೆದುಕೊಂಡು ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ತರಬೇತಿಯಲ್ಲಿ‌ ಭಾಗವಹಿಸಿದ್ದ ಮಹಿಳಾ‌ ಜನಪ್ರತಿನಿಧಿಗಳು ಹೆಬ್ಬಾಳ ಗ್ರಾಮ ಪಂಚಾಯಿತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳು, ನರೇಗಾ ಯೋಜನೆ, ಸ್ವಚ್ಛ ಭಾರತ, ತೆರಿಗೆ ವಸೂಲಾತಿ ಸೇರಿ ಇನ್ನಿತರ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಡಿಜಿಟಲ್ ಗ್ರಂಥಾಲಯ, ಆಯುರ್ವೇದ ಆಸ್ಪತ್ರೆ ಸೇರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪಂಚಾಯಿತಿಯ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಹೆಬ್ಬಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿ ಭಜಂತ್ರಿ, ಸದಸ್ಯರಾದ ಬಸವರಾಜ ಕಮತಗಿ, ಚಿಮ್ಮಲಗಿ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ್ ಕಾಳಗಿ, ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಐ.ಎಸ್.ಪಾಟೀಲ, ತಾಲ್ಲೂಕು ಪಂಚಾಯಿತಿ ಐಇಸಿ ಸಂಯೋಜಕ ದಸ್ತಗೀರ್ ಗುಡಿಹಾಳ, ಗ್ರಾಮದ ಪ್ರಮುಖರಾದ ರಾಮಪ್ಪ ತಳವಾರ, ಮುದ್ದೇಬಿಹಾಳ ತಾಲ್ಲೂಕು ಪಂಚಾಯಿತಿ ತರಬೇತಿ ವಿಷಯ ನಿರ್ವಾಹಕ ಬಾಬು ಪಟೇಗೋಳ, ಹೆಬ್ಬಾಳ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಭಾರತಿ ಗೋನಾಳ, ಡಿಇಒ ಪರಮಾನಂದ ಬಿರಾದಾರ, ಅರಿವು ಕೇಂದ್ರದ ಮೇಲ್ವಿಚಾರಕ ಶಿವಾನಂದ ದೇಸಾಯಿ, ಯಲಗೂರೇಶ ಪಾತ್ರದ ಇದ್ದರು.