ADVERTISEMENT

ವಿಜಯಪುರ: ‘ಅಕ್ಕ’ನ ಅರೆಬೆತ್ತಲೆ ಪುತ್ಥಳಿ ತೆರವಿಗೆ ಆಗ್ರಹ

ಬಸವಪರ ಸಂಘಟನೆಗಳ ಪ್ರಮುಖರಿಂದ ಜಿಲ್ಲಾಡಳಿತ, ವಿವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:42 IST
Last Updated 24 ಜುಲೈ 2025, 4:42 IST
ವಿಜಯಪುರ ಜಿಲ್ಲಾಧಿಕಾರಿ ಆನಂದ್  ಅವರಿಗೆ  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಸವಪರ ಸಂಘಟನೆಗಳ ಪ್ರಮುಖರು  ಬುಧವಾರ ಮನವಿ ಸಲ್ಲಿಸಿದರು 
ವಿಜಯಪುರ ಜಿಲ್ಲಾಧಿಕಾರಿ ಆನಂದ್  ಅವರಿಗೆ  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಸವಪರ ಸಂಘಟನೆಗಳ ಪ್ರಮುಖರು  ಬುಧವಾರ ಮನವಿ ಸಲ್ಲಿಸಿದರು    

ವಿಜಯಪುರ: ನಗರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅರೆಬೆತ್ತಲೆಯಲ್ಲಿರುವ ಅಕ್ಕಮಹಾದೇವಿ ಪುತ್ಥಳಿಯನ್ನು ಕೂಡಲೇ ತೆರವುಗೊಳಿಸಬೇಕು, ಬಸವ ಅಧ್ಯಯನ ಪೀಠ ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ, ಅಕ್ಕನ ಅರಿವು, ನೀಲಮ್ಮನ ಬಳಗ, ಶರಣ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಬಸವಪರ ಸಂಘಟನೆಗಳ ಪ್ರಮುಖರು ಬುಧವಾರ ಜಿಲ್ಲಾಧಿಕಾರಿ ಆನಂದ್  ಅವರಿಗೆ ಮನವಿ ಸಲ್ಲಿಸಿದರು.

ಸಿಂದಗಿ, ಮುದ್ದೇಬಿಹಾಳ, ಜಮಖಂಡಿ, ಬಾಗಲಕೋಟೆ ಸೇರಿದಂತೆ ವಿವಿಧ ಸ್ಥಳಗಳಿಂದ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಬಸವ ಭಕ್ತರು, ಘೋಷಣೆಗಳನ್ನು ಕೂಗುತ್ತ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಿ, ಹೆಚ್ಚಿನ ಆರ್ಥಿಕ ಅನುದಾನ ನೀಡಿ, ಶರಣ ಸಾಹಿತ್ಯದ ಸಂಶೋಧನೆ ಪರಿಷ್ಕರಣೆ, ಪ್ರಕಟಣೆಗೆ ತ್ವರಿತವಾಗಿ ಕಾರ್ಯ ರೂಪಿಸಬೇಕು ಎಂದರು.

ADVERTISEMENT

ಈಗಿರುವ ವೀರಾಗಿಣಿ ಅಕ್ಕಮಹಾದೇವಿ ಅರೆಬೆತ್ತಲೆ ಪುತ್ಥಳಿಯನ್ನು ಕೂಡಲೇ ತೆರುವುಗೊಳಿಸಿ ಆ ಸ್ಥಳದಲ್ಲಿ ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕಮಹಾದೇವಿ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಪಟ್ಟಣ ಆಗ್ರಹಿಸಿದರು.

ಜಾನಪದ ವಿದ್ವಾಂಸ, ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿ, ನಗರ ಹಾಗೂ ತಾಲ್ಲೂಕು ಕೇಂದ್ರಗಳ ಪ್ರಮುಖ ಬೀದಿಗಳಿಗೆ ಮತ್ತು ವೃತ್ತಗಳಿಗೆ ಜಿಲ್ಲೆಯ ಶರಣರಾದ ಹಡಪದ ಅಪ್ಪಣ್ಣ, ಅಕ್ಕ ನಾಗಮ್ಮ, ನುಲಿಯ ಚಂದಯ್ಯ ಹಾವಿನಾಳ ಕಲ್ಲಯ್ಯ, ಚೆನ್ನ ಬಸವಣ್ಣ, ಮಡಿವಾಳ ಮಾಚಿದೇವ, ಚೆನ್ನ ಬಸವಣ್ಣ, ಕುರುಬ ಗೊಲ್ಲಾಳ ಸೇರಿದಂತೆ ಎಲ್ಲ ಶರಣರ ಹೆಸರಿಡಬೇಕು ಎಂದು ಒತ್ತಾಯಿಸಿದರು.

ಬಸವ ಜನ್ಮಸ್ಥಳವಾದ ವಿಜಯಪುರಕ್ಕೆ ‘ಬಸವೇಶ್ವರ ಜಿಲ್ಲೆ’ಯೆಂದು ಮರುನಾಮಕರಣ ಮಾಡಬೇಕು. ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ವಿ.ಸಿ.ನಾಗಠಾಣ, ಡಾ.ಸರಸ್ವತಿ ಪಾಟೀಲ, ವಿಜಯ ಮಹಾಂತಮ್ಮ, ಬಸವರಾಜ ಕೋರಿ, ಪ್ರೊ.ಆರ್.ಎಸ್.ಬಿರಾದಾರ, ನಳಿನಿ ಮಹಾಗಾಂವಕರ, ಸಾಹಿತಿ ಸುಧಾ ಪಾಟೀಲ, ಶಾಂತಕ್ಕ ಧುಲಂಗೆ, ರೇಣುಕಾ ಬಾಗಲಕೋಟೆ,  ಶೈಲಾ ಮಣೂರ, ಪ್ರೊ.ಬಿ.ಎಸ್.ಹಣಮಶೆಟ್ಟಿ, ಶಿವಪ್ಪ ಗೌಸಾನಿ, ಶಿವಾನಂದ ಕೋರಿ, ರತ್ನಾಬಾಯಿ ಬಿರಾದಾರ, ಸಾಹಿತಿ ಜಂಬುನಾಥ ಕಂಚಾಣಿ, ಸಿದ್ದಪ್ಪ ಪಡನಾಡ, ಬಸಮ್ಮ ಭರಮಶೆಟ್ಟಿ, ಡಾ.ಶಾರದಾಮಣಿ ಹುನಶಾಳ, ಪ್ರೊ ಆರ್.ಎಸ್ ಬಿರಾದಾರ, ರೇಣುಕಾ ಪಾಟೀಲ, ಬಸವರಾಜ ಕೋರಿ,  ಮಹಾದೇವಿ ಕಿಣಗಿ, ಗೌರಮ್ಮ ನಾಶಿ, ಜಂಬುನಾಥ ಕಂಚಾಣಿ, ಸಂಗಮೇಶ ಕಲಹಾಳ, ಭಾಗ್ಯ ಕೋಟಿ, ಬೊರಮ್ಮ ರಾಂಪೂರ, ಡಾ.ಹನುಮಾಕ್ಷಿ ಗೋಗಿ, ರೇಣುಕಾ ಬಾಗಲಕೋಟೆ ಇದ್ದರು.

ಜಗತ್ತಿನ ದಾರ್ಶನಿಕ ಜಗಜ್ಯೋತಿ ಬಸವಣ್ಣನವರು ವಿಜಯಪುರ ಜಿಲ್ಲೆಯಲ್ಲಿ ಜನಿಸಿದ್ದರೂ ಸಹಿತ ಜಿಲ್ಲೆಯ ಬಹುತೇಕ ಶರಣರ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಪಟ್ಟಿವೆ. ಅವುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು.
ಡಾ.ಎಂ.ಎಂ.ಪಡಶೆಟ್ಟಿ ಸಾಹಿತಿ

ವಿವಿಗೆ ಮೂರು ತಿಂಗಳ ಗಡುವು

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ತೆರಳಿದ ಹೋರಾಟಗಾರರು ಮಹಿಳಾ ವಿವಿ ಕುಲಪತಿಗಳ ಪರವಾಗಿ ಕನ್ನಡ ವಿಭಾಗದ ಮುಖ್ಯಸ್ಥ ಮಹೇಶ ಚಿಂತಾಮಣಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಪ್ರೊ.ರಾಜಶೇಖರ ಪಾಟೀಲ ಅವರಿಗೆ ಅಕ್ಕಮಹಾದೇವಿ ಮೂರ್ತಿ ಬದಲಿಸಲು ಮೂರು ತಿಂಗಳ ಗಡುವು ನೀಡಿ ಮನವಿ ಸಲ್ಲಿಸಿದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.