ADVERTISEMENT

ಮದ್ಯದ ಅಮಲಿನಲ್ಲಿ ಹಲ್ಲೆ: ಸದಸ್ಯತ್ವ ರದ್ದಿಗೆ ಆಗ್ರಹಿಸಿ ಪತ್ರ ಬರೆದ ಶಾಸಕ ಯತ್ನಾಳ

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರಿಬ್ಬರ ಜಟಾಪಟಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 13:54 IST
Last Updated 9 ಅಕ್ಟೋಬರ್ 2018, 13:54 IST

ವಿಜಯಪುರ:‘ವಿಜಯಪುರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ (ಅ 6), ಮದ್ಯದ ನಶೆಯಲ್ಲಿ ಸದಸ್ಯನ ಮೇಲೆ ಹಲ್ಲೆ ನಡೆಸಿದ ಗೂಂಡಾ ಪ್ರವೃತ್ತಿಯ ಸದಸ್ಯನನ್ನು ಬಂಧಿಸಿ, ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಆತನ ಸದಸ್ಯತ್ವ ರದ್ದುಗೊಳಿಸಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾಧಿಕಾರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

‘ಮದ್ಯದ ಅಮಲಿನಲ್ಲಿದ್ದ ಸದಸ್ಯನೊಬ್ಬ, ಸಜ್ಜನ ಸ್ವಭಾವದ ಸದಸ್ಯ ರಾಜಶೇಖರ ಮಗಿಮಠ ಮೇಲೆ ಹಲ್ಲೆ ನಡೆಸಿ, ಕೊಲೆ ಯತ್ನಕ್ಕೆ ಮುಂದಾಗಿದ್ದಾನೆ. ಈತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಯತ್ನಾಳ ಪತ್ರದಲ್ಲಿ ಆಗ್ರಹಿಸಿದ್ದಾರೆ.

‘ಮಹಾನಗರ ಪಾಲಿಕೆಯ ಯಾವೊಂದು ಸಭೆಯೂ ಇದೂವರೆಗೂ ಸುಸೂತ್ರವಾಗಿ ನಡೆದಿಲ್ಲ. ಇದಕ್ಕೆ ಕ್ರಿಮಿನಲ್‌ ಹಿನ್ನೆಲೆಯುಳ್ಳ ಕೆಲ ಸದಸ್ಯರು, ಮದ್ಯದ ನಶೆಯಲ್ಲಿ ಗೂಂಡಾ ಪ್ರವೃತ್ತಿ ನಡೆಸುವ ಸದಸ್ಯರೇ ಪ್ರಮುಖ ಕಾರಣರಾಗಿದ್ದಾರೆ’ ಎಂದು ಯತ್ನಾಳ ಪತ್ರದಲ್ಲಿ ದೂರಿದ್ದಾರೆ.

ADVERTISEMENT

‘ಸರಣಿ ಕೊಲೆ ಪ್ರಕರಣಗಳಲ್ಲಿ ಭಾಗಿಯಾದವರು ಈ ಹಿಂದೆ ಮೇಯರ್‌ ಸಹ ಆಗಿದ್ದರು. ಪಿಸ್ತೂಲ್‌ನೊಟ್ಟಿಗೆ ಸಭೆಗೆ ಬರುತ್ತಾರೆ. ಶೇ 50ರಷ್ಟಿರುವ ಮಹಿಳಾ ಸದಸ್ಯರನ್ನು ಬೆದರಿಸುತ್ತಾರೆ.

ಕ್ರಿಮಿನಲ್‌ ಹಿನ್ನೆಲೆಯುಳ್ಳವರು, ಮದ್ಯದ ಅಮಲಿನ ಗೂಂಡಾಗಳು ಮುಂದಿನ ದಿನಗಳಲ್ಲಿ ಮಹಿಳಾ ಸದಸ್ಯರ ಮೇಲೂ ಹಲ್ಲೆ ನಡೆಸಬಹುದು. ಅತ್ಯಾಚಾರ ಎಸಗುವ ಮಟ್ಟಕ್ಕೂ ಇಳಿಯಬಹುದು. ಇದಕ್ಕೆ ಅಂಜಿ ಹಲ ಮಹಿಳಾ ಸದಸ್ಯರು ಸಭೆಗಳಲ್ಲಿ ಗೈರಾಗುತ್ತಾರೆ. ಪಾಲಿಕೆ ಸಿಬ್ಬಂದಿಯೂ ಇವರಿಗೆ ಬೆದರುತ್ತಾರೆ.

ಮುಂದಿನ ಸಭೆಗಳಿಗೆ ಸೂಕ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಬೇಕು. ಸದಸ್ಯರು ಮದ್ಯಪಾನ ಮಾಡಿದ್ದಾರೋ, ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ವೈದ್ಯಕೀಯ ತಪಾಸಣೆ ನಡೆಸಬೇಕು. ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿ ಸಭೆ ಪ್ರವೇಶಿಸಲು ಅನುಮತಿ ನೀಡಬೇಕು’ ಎಂದು ಯತ್ನಾಳ ತಮ್ಮ ಪತ್ರದಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.