ವಿಜಯಪುರ: ‘ದೇಶದ ಬಡವರ ಹಸಿವು ನೀಗಿಸಿದ ಮಹಾನ್ ಪುರುಷ ಡಾ.ಬಾಬು ಜಗಜೀವನರಾಂ. ಇವರು ಪ್ರತಿಪಾದಿಸಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎಚ್.ಟಿ.ಪೋತೆ ಅಭಿಪ್ರಾಯಪಟ್ಟರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 112ನೇ ಜಯಂತಿಯಲ್ಲಿ ಅವರು ಮಾತನಾಡಿದರು.
‘ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರಿತು ಮುನ್ನಡೆದಾಗ ಮಾತ್ರ, ಧ್ವನಿ ಇಲ್ಲದ ಸಮುದಾಯಕ್ಕೆ ಜೀವ ತುಂಬಿದ ಬಾಬು ಜಗಜೀವನರಾಂ ಅವರಂಥಹ ಮಹಾನ್ ವ್ಯಕ್ತಿಗಳಿಗೆ ಇಂತಹ ಒಂದು ದಿನವನ್ನು ಅರ್ಪಿಸಿದಂತಾಗುತ್ತದೆ’ ಎಂದರು.
‘ಜಾತಿ ವ್ಯವಸ್ಥೆ ಬದಲಾಗಬೇಕಾದರೆ ವಿದ್ಯಾವಂತರ ಮನಸ್ಥಿತಿಗಳು ಬದಲಾಗಬೇಕು. ಮನಸ್ಥಿತಿಗಳು ಬದಲಾಗದ ಹೊರತು ಯಾವ ಕಾನೂನು ಕ್ರಮಗಳು ಕೂಡ ಜಾತಿಯತೆಯನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಇಂತಹ ಮನಸ್ಥಿತಿಗಳನ್ನು ಬದಲಾಯಿಸುವಲ್ಲಿ ಬಾಬು ಜಗಜೀವನರಾಂ ಅವರಂಥಹ ಮಹಾನ್ ವ್ಯಕ್ತಿಗಳ ತ್ಯಾಗ ದೊಡ್ಡದಿದೆ’ ಎಂದರು.
ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ ‘ಜಾತಿಗೂ ಪ್ರತಿಭೆಗೂ ತುಲನೆ ಮಾಡುವಂತಹ ಪ್ರಸ್ತಾಪದ ನಿಲುವುಗಳ ಬಗ್ಗೆ ಅರಿತುಕೊಂಡು, ಸಮಾನತೆಯ ಛಾಯೆಯನ್ನು ಮೂಡಿಸಬೇಕಿದೆ’ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಎಂ.ಜ್ಯೋತಿ, ಡಾ.ಎಂ.ಪಿ.ಬಳಿಗಾರ, ಡಾ.ರಮೇಶ ಸೋನಕಾಂಬಳೆ, ಡಾ.ಉದಯಕುಮಾರ ಕುಲಕರ್ಣಿ, ಡಾ.ಲಕ್ಷ್ಮೀದೇವಿ, ಡಾ.ಶಾಂತಾದೇವಿ, ಡಾ.ಕಲಾವತಿ ಕಾಂಬಳೆ, ಡಾ.ಶ್ವೇತಾ, ಡಾ.ನಾಗರಾಜ್, ಡಾ.ಪ್ರಕಾಶ ಬಡಿಗೇರ, ಅಶ್ವಿನಿ, ಡಾ.ಭಾರತಿ ಗಾಣಿಗೇರ, ಡಾ.ಯಲ್ಲಪ್ಪ ಉಪಸ್ಥಿತರಿದ್ದರು.
ವಿ.ವಿ.ಯ ಸಂಗೀತ ಅಧ್ಯಯನ ವಿಭಾಗ ಮತ್ತು ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕ ಡಾ.ಸಕ್ಪಾಲ ಹೂವಣ್ಣ ಸ್ವಾಗತಿಸಿ ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಜ್ಯೋತಿಲಕ್ಷ್ಮೀ ಇರಸುರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.