
ಬಸವನಬಾಗೇವಾಡಿ: ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಮಾರಂಭವೊಂದರಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಅವಾಚ್ಯ ಶಬ್ದ ಬಳಸಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ವಿವಿಧ ಬಸವಪರ ಸಂಘಟನೆಗಳು ಹಾಗೂ ಬಸವ ಭಕ್ತರು ಕನೇರಿ ಶ್ರೀಗಳ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಪ್ರತಿಕೃತಿ ದಹಿಸಿ ನಡೆಸಿದ ಪ್ರತಿಭಟಿಸಿದರು.
‘ನಿರ್ಬಂಧದ ನಡುವೆಯೂ ಕನೇರಿ ಸ್ವಾಮೀಜಿ ಬಸವನಬಾಗೇವಾಡಿಗೆ ಬಂದರೆ ಅವರ ಮಠ ಹೊಕ್ಕು ಚಪ್ಪಲಿ ಸೇವೆ ಮಾಡುತ್ತೇವೆ. ಇಲ್ಲದಿದ್ದರೆ ಬಸವನಬಾಗೇವಾಡಿ ಭಕ್ತರು ಲಿಂಗಾಯತರೇ ಅಲ್ಲ’ ಎಂದು ಮುಖಂಡ ಸಂಗನಗೌಡ ಚಿಕ್ಕೊಂಡ ಎಚ್ಚರಿಕೆ ನೀಡಿದರು.
ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕನೇರಿ ಸ್ವಾಮೀಜಿ ಎಲ್ಲಾ ಲಿಂಗಾಯತ ಮಠಾಧೀಶರ ಬಗ್ಗೆ ತುಚ್ಚುವಾಗಿ, ಅವಹೇಳನಕಾರಿಯಾಗಿ ಮಾತನಾಡಿರುವುದು ಅತ್ಯಂತ ನೋವುಂಟು ಮಾಡಿದೆ. ಶ್ರೀಗಳು ಬಳಸಿರುವ ಅವಾಚ್ಯ ಪದ ಅವರ ಘನತೆ, ಗೌರವಕ್ಕೆ ತಕ್ಕುದಲ್ಲ ಎಂದರು.
ಮಸಬಿನಾಳದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವ ಸಂಸ್ಕೃತಿ ಅಭಿಯಾನ ಸಮಾರಂಭದಲ್ಲಿ ಧನ್ಯವಾದಗಳನ್ನು ಅರ್ಪಿಸಲು ಮಠಾಧೀಶರು ಹೋಗಿದ್ದೇವು ಹೊರತು ರಾಜಕೀಯ ಉದ್ದೇಶಕ್ಕಲ್ಲ ಎಂದರು.
ಕಾಡಸಿದ್ದೇಶ್ವರ ಸ್ವಾಮೀಜಿ ಖಾವಿ ಧರಿಸಿ ಸಂಸ್ಕಾರ ಹೀನನಂತೆ ಲಿಂಗಾಯತ ಮಠಾಧೀಶರು, ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ತುಚ್ಛ ಪದ ಬಳಸಿ ಅಸಭ್ಯವಾಗಿ ಮಾತನಾಡಿರುವುದು ಅವಿವೇಕತನ ಹಾಗೂ ಹುಚ್ಚುತನ ಎಂದರು.
ಬಸವನಬಾಗೇವಾಡಿ ಯಲ್ಲಾಲಿಂಗ ಮಹಾರಾಜರ ಮಠದ ಬಸವರಾಜ ಮಹಾರಾಜರು, ಹಿರಿಯರಾದ ಲ.ರು.ಗೊಳಸಂಗಿ, ಎಫ್.ಡಿ.ಮೇಟಿ, ವೀರಣ್ಣ ಮರ್ತೂರ, ಎಂ.ಜಿ.ಆದಿಗೊಂಡ, ಬಸವರಾಜ ಹಾರಿವಾಳ, ಎಸ್.ಎಸ್.ಝಳಕಿ, ವಿವೇಕಾನಂದ ಕಲ್ಯಾಣಶೆಟ್ಟಿ, ಸಿ.ಎಲ್.ಮುರಾಳ, ಮಹಾಂತೇಶ ಮಡಿಕೇಶ್ವರ, ಆರ್.ಜಿ.ಅಳ್ಳಗಿ, ಎಚ್.ಎಸ್.ಬಿರಾದಾರ, ಎಸ್.ಎ.ದೇಗಿನಾಳ, ಮಲ್ಲಿಕಾರ್ಜುನ ಹಡಪದ, ಶೇಖರ ಗೊಳಸಂಗಿ, ಬಸವರಾಜ ಏವೂರ, ಬಸವರಾಜ ಗೊಳಸಂಗಿ, ಶೇಖನಗೌಡ ಪಾಟೀಲ, ಸುರೇಶ ಪಾಟೀಲ, ಸಂಕನಗೌಡ ಪಾಟೀಲ, ಮುಖಂಡರಾದ ಶಂಕರಗೌಡ ಪಾಟೀಲ, ರವಿ ರಾಠೋಡ, ಪ್ರಶಾಂತ ಮುಂಜಾನೆ, ಸಂಗಮೇಶ ಓಲೇಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.