ವಿಜಯಪುರ: ಯಡಿಯೂರಪ್ಪ ಅವಧಿಯಲ್ಲಿ ನಡೆದ ಭ್ರಷ್ಟ್ರಾಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪಾಲುದಾರ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಸಿಂದಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮೊರಟಗಿಯಲ್ಲಿ ಸೋಮವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದಬೊಮ್ಮಾಯಿ ಕೂಡ ಲೂಟಿ ಹೊಡೆದ ಗಿರಾಕಿಯೇ ಎಂದು ಹೇಳಿದರು.
ಬೊಮ್ಮಾಯಿ ಜನರಿಂದ ಆಯ್ಕೆಯಾಗಿ ಬಂದವರಲ್ಲ, ಆರ್ಎಸ್ಎಸ್ನಿಂದ ನೇಮಕವಾದ ಗಿರಾಕಿ. ಹೊಸವೇಷ ಹಾಕಿಕೊಂಡು ಈಗ ಜನರ ಮುಂದೆ ಬಂದಿದ್ದಾರೆ. ರಾಜ್ಯವನ್ನು ಕೇಸರಿಕರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಸತ್ಯ ನಾಶ ಸರ್ಕಾರ:ಪ್ರಧಾನಿ ಮೋದಿ ಅವರದು ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಸರ್ಕಾರವಲ್ಲ; ಸಬ್ ಕಾ ಸತ್ಯ ನಾಶ್ ಸರ್ಕಾರ್’ ಎಂದುರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರ ಹೆಸರು ಬದಲಿಸುವ ಸರ್ಕಾರವೇ ಹೊರತು ಕೆಲಸ ಮಾಡುವ ಸರ್ಕಾರವಲ್ಲ. ಯುಪಿಎ ಅವಧಿಯಲ್ಲಿ ಜಾರಿಯಾದ ಜನಪರ ಯೋಜನೆಗಳನ್ನು ಬದಲಾವಣೆ ಮಾಡುವ, ನಾಯಕ ಹೆಸರು ಬದಲಾವಣೆಗಷ್ಟೇ ಸೀಮಿತವಾಗಿದೆ ಎಂದರು.
ಕರ್ನಾಟಕ, ಗೋವಾ, ಉತ್ತರಾಖಂಡ, ಮಧ್ಯಪ್ರದೇಶ, ಮಣಿಪುರದಲ್ಲಿ ರಚನೆಯಾಗಿದ್ದ ಕಾಂಗ್ರೆಸ್ನ ಸ್ಥಿರ ಸರ್ಕಾರಗಳನ್ನು ಮೋದಿ, ಅಮಿತ್ ಶಾ ಜೋಡಿ ಇಡಿ, ಸಿಬಿಐ ದುರುಪಯೋಗ ಪಡಿಸಿಕೊಂಡು ವಾಮಮಾರ್ಗದ ಮೂಲಕ ಕೆಡವಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನ ಬಾಹಿರವಾಗಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಾಯಕರ ದಂಡು: ಸಿಂದಗಿ ಚುನಾವಣಾ ಅಖಾಡದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ನ ಬಹುತೇಕ ರಾಜ್ಯ ನಾಯಕರು ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದಾರೆ. ಗ್ರಾಮ, ಗ್ರಾಮಗಳಿಗೆ ತೆರಳಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.