ADVERTISEMENT

ಭೈರಗೊಂಡ ಶೂಟ್‌ಔಟ್‌ ಪ್ರಕರಣ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 3:49 IST
Last Updated 6 ನವೆಂಬರ್ 2020, 3:49 IST
ಮಹಾದೇವ ಸಾಹುಕಾರ ಭೈರಗೊಂಡ
ಮಹಾದೇವ ಸಾಹುಕಾರ ಭೈರಗೊಂಡ   

ವಿಜಯಪುರ: ಕಾಂಗ್ರೆಸ್‌ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಚಲಿಸುತ್ತಿದ್ದ ಕಾರಿಗೆ ಟಿಪ್ಪರ್‌ನಿಂದ ಡಿಕ್ಕಿ ಹೊಡೆಸಿ, ಗುಂಡಿನ ದಾಳಿ ನಡೆಸಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಭೈರಗೊಂಡ ಅವರ ಕಾರಿಗೆ ಗುದ್ದಿದ ಟಿಪ್ಪರ್‌ ಚಾಲಕ ಹಾಗೂ ಮಾಹಿತಿ ನೀಡಿದ ಆರೋಪಿಯನ್ನು ಬಂಧಿಸಿರುವುದಾಗಿ ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್‌ ಗುರುವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟಿಪ್ಪರ್ ಚಾಲಕ ಉಮರಾಣಿ ನಾಗಪ್ಪ ಪೀರಗೊಂಡ(28) ಹಾಗೂ ಭೈರಗೊಂಡ ಅವರ ಚಲನವಲನದ ಬಗ್ಗೆ ಮಾಹಿತಿ ನೀಡುತ್ತಿದ್ದ ವಿಜಯಪುರದ ವಿಜಯ ತಾಳಿಕೋಟೆ(27) ಎಂಬುವವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ADVERTISEMENT

ರೌಡಿ ಗ್ಯಾಂಗ್‌ ಕಟ್ಟಿಕೊಳ್ಳಬೇಕು ಎಂಬ ಉದ್ದೇಶ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಡಿವಾಳ ಹಿರೇಮಠ ಸ್ವಾಮಿ ಎಂಬ ವ್ಯಕ್ತಿ ಈ ಪ್ರಕರಣದ ಕೇಂದ್ರ ಬಿಂದುವಾಗಿದ್ದಾನೆ. ಕಳೆದ ಆರೇಳು ತಿಂಗಳಿಂದ ಈ ಸಂಬಂಧ ಗ್ಯಾಂಗ್‌ ಕಟ್ಟಿಕೊಂಡಿರುವುದಾಗಿ ತಿಳಿಸಿದರು.

ಧರ್ಮರಾಜ್ ಚಡಚಣನ ಹಳೆಯ ಸಹಚರರು ಸಹ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಕಾತ್ರಾಳ ಗ್ರಾಮದಲ್ಲಿ ನಡೆದ ಸತ್ಸಂಗ ಸಂದರ್ಭದಲ್ಲಿಯೂ ಮಹಾದೇವ ಸಾಹುಕಾರ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು. ಆದರೆ, ಕಾರ್ಯಕ್ರಮ ರದ್ದಾದ ಕಾರಣ ಸಾಧ್ಯವಾಗಲಿಲ್ಲ ಎಂದರು.

ಪ್ರಕರಣದ ಮುಖ್ಯ ಆರೋಪಿ ಮಡಿವಾಳ ಹಿರೇಮಠ ಸ್ವಾಮಿ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.