ADVERTISEMENT

ಬುದ್ಧನ ಬೋಧನೆ ಪಾಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 14:54 IST
Last Updated 15 ಸೆಪ್ಟೆಂಬರ್ 2019, 14:54 IST
ವಿಜಯಪುರದಲ್ಲಿ ಬುದ್ಧವಿಹಾರ ನಿರ್ಮಾಣ ಸಮಿತಿ, ಭಾರತೀಯ ಬೌದ್ಧ ಮಹಾಸಭಾ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬೌದ್ಧ ವಿಧಿ ದೀಪ’ ಕೃತಿ ಲೋಕಾರ್ಪಣೆ ಮಾಡಲಾಯಿತು
ವಿಜಯಪುರದಲ್ಲಿ ಬುದ್ಧವಿಹಾರ ನಿರ್ಮಾಣ ಸಮಿತಿ, ಭಾರತೀಯ ಬೌದ್ಧ ಮಹಾಸಭಾ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬೌದ್ಧ ವಿಧಿ ದೀಪ’ ಕೃತಿ ಲೋಕಾರ್ಪಣೆ ಮಾಡಲಾಯಿತು   

ವಿಜಯಪುರ: ‘ಜಗತ್ತಿನ ಜನರಿಗೆ ಇಂದು ಶಾಂತಿ ಬೇಕಾಗಿದೆ. ಅದು ಭಗವಾನ್ ಬುದ್ಧನ ಬೋಧನೆಗಳ ಪಾಲನೆಯಿಂದ ಮಾತ್ರ ಸಾಧ್ಯ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.

ನಗರದ ಸಿಎಂಸಿ ಕಾಲೊನಿಯ ಅನಿಲ್ ಹೊಸಮನಿ ಅವರ ನಿವಾಸದಲ್ಲಿ ಬುದ್ಧ ವಿಹಾರ ನಿರ್ಮಾಣ ಸಮಿತಿ, ಭಾರತೀಯ ಬೌದ್ಧ ಮಹಾಸಭಾ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವದೆಲ್ಲೆಡೆ ಇಂದು ಯುದ್ಧ ಭೀತಿ ಆವರಿಸಿದೆ. ಭಯೋತ್ಪಾದನೆ ಹೆಸರಿನಲ್ಲಿ ಸಮಾಜದಲ್ಲಿ ಅರಾಜಕತೆ ತಾಂಡವ ಆಡುತ್ತಿದ್ದು, ಅಶಾಂತಿಯ ವಾತಾವರಣ ಸೃಷ್ಟಿ ಆಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಚಂದ್ರಶೇಖರ ಹೊಸಮನಿ ಅವರು 50 ವರ್ಷಗಳ ಹಿಂದೆ ಪ್ರಕಟಿಸಿದ್ದ ‘ಬೌದ್ಧ ವಿಧಿ ದೀಪ’ ಕೃತಿ ಮರುಮುದ್ರಣ ಕಾಣುತ್ತಿರುವುದು ಸ್ವಾಗತಾರ್ಹ. ಸಜ್ಜನ ರಾಜಕಾಣಿ, ಪ್ರಬುದ್ಧ ಲೇಖಕ ಮತ್ತು ಪತ್ರಕರ್ತ, ಪ್ರಾಮಾಣಿಕ ಸಾಮಾಜಿಕ ಹೋರಾಟಗಾರರಾಗಿದ್ದ ದಿ. ಚಂದ್ರಶೇಖರ ಹೊಸಮನಿ ಅವರ ವಿಚಾರಗಳು ಹೊಸ ಪೀಳಿಗೆಗೆ ದಾರಿದೀಪವಾಗಿವೆ’ ಎಂದು ತಿಳಿಸಿದರು.

ಬುದ್ಧನ ತತ್ವ ಸಿದ್ಧಾಂತಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸೊಲ್ಲಾಪುರದ ಕೆ.ಎಂ.ಕಾಂಬಳೆ, ವಿಜಯಪುರದ ಸಂತೋಷ ಶಹಾಪುರ, ವೆಂಕಟೇಶ ವಗ್ಯಾನವರ, ನಾಗರಾಜ ಲಂಬು, ಪರಶುರಾಮ ಲಂಬು ದಂಪತಿ ಹಾಗೂ ಲೇಖಕ ಎನ್.ಬಿ.ರೋಡಗಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಾ ಕಳ್ಳಿಮನಿ, ರಾಜಶೇಖರ ಯಡಹಳ್ಳಿ, ಶಶಿಕಾಂತ ಹೊನವಾಡಕರ, ಚಿದಾನಂದ ನಿಂಬಾಳಕರ, ಬಿ.ಸಿ.ಗೋವರ್ಧನ, ಮಿಲಿಂದ ಚಂಚಲಕರ ಇದ್ದರು.

ಅನಿಲ ಹೊಸಮನಿ, ಶಾರದಾ ಹೊಸಮನಿ ಅವರು ಮುಂದಿನ ಹುಣ್ಣಿಮೆಯ ‘ಧಮ್ಮ ದೀಪ’ವನ್ನು ಸಾಬು ಚಲವಾದಿ, ಸುಲೋಚನಾ ಚಲವಾದಿ ಅವರಿಗೆ ಹಸ್ತಾಂತರಿಸಿದರು.

ಪತ್ರಕರ್ತ ಅನಿಲ ಹೊಸಮನಿ ಸ್ವಾಗತಿಸಿದರು. ಧಮ್ಮಾಚಾರಿ ಶಂಕರ ಔದಿ ತ್ರಿಸರಣ– ಪಂಚಶೀಲ ಬೋಧಿಸಿದರು. ಸಂತೋಷ ಶಹಾಪುರ ನಿರೂಪಿಸಿದರು. ವೆಂಕಟೇಶ ವಗ್ಯಾನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.