ವಿಜಯಪುರ: ಆರ್ಥಿಕ ಸಮಸ್ಯೆಯಿಂದ ಗಂಟಲು ಧ್ವನಿಪೆಟ್ಟಿಗೆಯ ಶಸ್ತ್ರಚಿಕಿತ್ಸೆ ಮಾಡಿಸಲಾಗದೇ ಪರದಾಡುತ್ತಿದ್ದಯುವಕನೊಬ್ಬನಿಗೆ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಹಿರಿಯ ಪುತ್ರ, ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಮುದ್ದೇಬಿಹಾಳ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದ ಯುವಕ ಮಂಜುನಾಥ ಮಲಗೊಂಡ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದ. ಮನೆಯಲ್ಲಿನ ಗಂಭೀರ ಸಮಸ್ಯೆಯಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಮುಂದಾಗಿದ್ದ. ಆ ವೇಳೆ ಬದುಕುಳಿದ ಆತನ ಗಂಟಲಿನಲ್ಲಿರುವ ಧ್ವನಿಪೆಟ್ಟಿಗೆಗೆ ಭಾರೀ ಪೆಟ್ಟು ಬಿದ್ದು ದನಿ ಉಡುಗಿ ಹೋಗಿತ್ತು. ಶಸ್ತ್ರಚಿಕಿತ್ಸೆ ಮಾಡಿದರೆ ಮಾತ್ರ ಮೊದಲಿನಂತೆ ಧ್ವನಿ ಸರಿಯಾಗುವುದಾಗಿ ವೈದ್ಯರು ತಿಳಿಸಿದ್ದರು.
ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಈತನಿಗೆ ಶಸ್ತ್ರಚಿಕಿತ್ಸೆಗೆ ಬೇಕಾಗುವಷ್ಟು ಹಣ ಹೊಂದಿಸುವುದು ಸಾಧ್ಯವಿರಲಿಲ್ಲ. ಈತನ ಪರಿಸ್ಥಿತಿಯನ್ನು ತನ್ನ ಸ್ನೇಹಿತರಿಂದ ತಿಳಿದ ಭರತಗೌಡರು ತಮ್ಮ ತಂದೆ ಶಾಸಕ ನಡಹಳ್ಳಿಯವರೊಂದಿಗೆ ಚರ್ಚಿಸಿ ಆತನ ಧ್ವನಿ ಪೆಟ್ಟಿಗೆಯ ಶಸ್ತ್ರಚಿಕಿತ್ಸೆಗಾಗಿ ಸೋಮವಾರ ₹ 50 ಸಾವಿರ ಆರ್ಥಿಕ ನೆರವು ನೀಡಿದರು.
ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಪ್ರಸನ್ನಕುಮಾರ ಮಠ, ರಾಜಶೇಖರ ಹೊನ್ನುಟಗಿ, ನಿಖಿಲ್ಗೌಡ ಪಾಟೀಲ, ರಾಮು ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.