ವಿಜಯಪುರ: ‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಕಾಯ್ದೆಯು ಕುರುಡನ ಕೈಯಲ್ಲಿ ಆನೆ ಕೊಟ್ಟಂತೆ ಆಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಇಲ್ಲಿ ಆರೋಪಿಸಿದರು.
‘ಎನ್ಆರ್ಸಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಏನೂ ಗೊತ್ತಿಲ್ಲ. ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಾಗಲಿ, ಸಂಸತ್ನಲ್ಲಾಗಲಿ ಈ ಬಗ್ಗೆ ಚರ್ಚೆ ಆಗಿಲ್ಲ ಎಂದು ಅಮಿತ್ ಶಾ ಹೇಳಿದರೆ, ಪ್ರಧಾನಿ ನರೇಂದ್ರ ಮೋದಿ ಚರ್ಚೆ ಆಗಿದೆ ಎಂದು ಹೇಳಿದ್ದಾರೆ. ಇವರ ಭಿನ್ನ ಹೇಳಿಕೆಗಳಿಂದಾಗಿ ದೇಶದ 130 ಕೋಟಿ ಜನರು ಭಯಭೀತರಾಗಿದ್ದಾರೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಅಸ್ಸಾಂನಲ್ಲಿ ಎನ್ಆರ್ಸಿ ಪ್ರಕ್ರಿಯೆ ನಂತರ ಸಾವಿರಾರು ಜನ ಬಂಧನ ಕೇಂದ್ರಗಳಲ್ಲಿದ್ದಾರೆ. ಆದರೆ, ಮೋದಿ ಆಗಲಿ, ಅಮಿತ್ ಶಾ ಆಗಲಿ ಇದುವರೆಗೂ ಅಸ್ಸಾಂಗೆ ಭೇಟಿ ನೀಡಿಲ್ಲ. ಅವರ ಸಂಕಷ್ಟಗಳನ್ನು ಆಲಿಸಿಲ್ಲ’ ಎಂದು ದೂರಿದರು.
ಗಡಗಡ ನಡುಕ: ‘ಮೋದಿಯನ್ನು ಕಂಡರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಡಗಡ ನಡುಗುತ್ತಾರೆ. ಕೇಂದ್ರ ಸರ್ಕಾರದಿಂದ ಅನುದಾನ ತರಲು ಇವರಿಗೆ ಧೈರ್ಯ ಇಲ್ಲ. ಹೀಗಾಗಿ, ರಾಜ್ಯದ ಆಡಳಿತ ಕುಸಿದಿದೆ’ ಎಂದು ಟೀಕಿಸಿದರು.
‘ಸಂಪುಟ ವಿಸ್ತರಣೆಯಿಂದ ಹಳೆಯ ಪಟ್ಟದ ವೈಶ್ಯೆಯರು (ಮೂಲ ಬಿಜೆಪಿಯವರು) ಹಾಗೂ ಹೊಸ ಪತಿವ್ರತೆಯರ ಮಧ್ಯೆ ಜಗಳ ಆರಂಭವಾಗಿದೆ. ಇಂತಹ ಪತಿವ್ರತೆಯರನ್ನು ಸುಧಾರಿಸುವುದು ಕಷ್ಟ’ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.