ಮುದ್ದೇಬಿಹಾಳ: ರಾಜ್ಯದಲ್ಲಿ ಯುವ ಕಾಂಗ್ರೆಸ್ ಘಟಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು ನಿಷ್ಠೆಯಿಂದ ಇದ್ದರೆ ಪಕ್ಷ ಗುರುತಿಸಿ ಸ್ಥಾನಮಾನ ನೀಡುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಸಭಾಭವನದಲ್ಲಿ ಭಾನುವಾರ ಯುವ ಕಾಂಗ್ರೆಸ್ ಘಟಕದಿಂದ ಯುವ ಸಮ್ಮೇಳನ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
’ಕೆಲವರು ಮಾತೆತ್ತಿದರೆ ನಾವು ಮೂವ್ವತ್ತು ವರ್ಷ ದುಡಿದಿದ್ದೇವೆ.ನಲವತ್ತು ವರ್ಷ ದುಡಿದಿದ್ದೇವೆ ಎಂದು ಹೇಳುತ್ತಿರುತ್ತಾರೆ. ಆದರೆ ಭಾವನಾತ್ಮಕ ಬೆಸುಗೆ ಪಕ್ಷದ ಸಿದ್ಧಾಂತದ ಜೊತೆಗೆ ಇರಬೇಕು. ಲಾಭ ಸಿಗುತ್ತದೆ ಎಂದು ಪಕ್ಷದಲ್ಲಿದ್ದರೆ ನಿರಾಶೆಗೆ ಒಳಗಾಗಬೇಕಾಗುತ್ತದೆ. ಅಪೇಕ್ಷೆ ಇಟ್ಟುಕೊಂಡು ದುಡಿದವರಿಗೆ ನಿರಾಸೆ ಆಗುತ್ತದೆ. ಅವರಿಂದ ಪಕ್ಷಕ್ಕೂ ಹಾನಿ ಆಗುತ್ತದೆ. ಇದು ಇಂದಿನ ಸವಾಲು ಎಂದು ಹೇಳಿದರು.
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ಸಿಎಂ ಆಗ್ತಾರೋ, ಸಿದ್ದರಾಮಯ್ಯ ಸಿಎಂ ಖುರ್ಚಿ ಬಿಟ್ಟುಕೊಡುತ್ತಾರೆಯೋ ಎಂದು ನಮ್ಮ ಪಕ್ಷದ ನಾಯಕರೇ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ವರಿಷ್ಠರೇ ಮಾತನಾಡಬೇಡಿ ಎಂದರೂ ಬಾಯಿಮುಚ್ಚಿಕೊಂಡು ಸುಮ್ಮನೆ ಕೂಡುತ್ತಿಲ್ಲ. ನಾನು ಇಲ್ಲಿ ಗಿಳಿ ಹಿಡಿದುಕೊಂಡು ಭವಿಷ್ಯ ಹೇಳುವುದಕ್ಕೆ ಕೂತಿಲ್ಲ. ಪಕ್ಷದ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೆ ಅಂತವರಿಗೆ ತಕ್ಕ ಉತ್ತರ ನೀಡಬೇಕು ಎಂದು ಶಾಸಕ ನಾಡಗೌಡ ತಿಳಿಸಿದರು.
ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ.ಎಚ್.ಎಸ್.ಮಾತನಾಡಿ, ಬಿಜೆಪಿಯವರು ಆರಂಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಇದೇ ಯೋಜನೆಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ.ಗ್ಯಾರಂಟಿ ಯೋಜನೆಗಳನ್ನು ವಿಶ್ವಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ವ ಧರ್ಮ ಒಗ್ಗೂಡಿಸುವ ಕೆಲಸ ಮಾಡಿದೆ. ಆದರೆ ಪ್ರಧಾನಿ ಮೋದಿ ದೇಶದಲ್ಲಿ ಕೋಮುವಾದ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಜಯಪುರ ಶಾಸಕ ಯತ್ನಾಳರದ್ದು ಜನರನ್ನು ತಮ್ಮತ್ತ ಸೆಳೆಯಬೇಕು ಎಂಬ ಆಕಾಂಕ್ಷೆಯಿಂದ ಏನೇನೋ ಮಾತನಾಡುತ್ತಾರೆ. ಅವರನ್ನು ಪಕ್ಷವೇ ದೂರ ಇಟ್ಟಿದೆ. ಇಂತಹ ಹೇಳಿಕೆಗಳನ್ನು ಅವರಿಂದ ಕೊಡುವಂತೆ ಪ್ರಚೋದಿಸುತ್ತಿರಬೇಕು ಎಂಬ ಅನುಮಾನ ನಮ್ಮದು. ನಮ್ಮ ನಮ್ಮಲ್ಲಿ ಸಹೋದರತ್ವದ ಮಧ್ಯೆ ವೈಷಮ್ಯ ಹುಟ್ಟು ಹಾಕಿ ಕೋಮುವಾದ ಬಿತ್ತುವ ಕೆಲಸ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ವೋಟ್ ಚೋರಿ ಹಾಗೂ ಜಿಎಸ್ಟಿ ಬಗ್ಗೆ ದೇಶದಲ್ಲಿ ಧ್ವನಿ ಎತ್ತಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. 2029 ಕ್ಕೆ ರಾಹುಲ್ ಗಾಂಧಿ ಅವರನ್ನು ಜನರು ಪ್ರಧಾನಿ ಮಾಡೇ ತೀರುತ್ತಾರೆ ಎಂದರು.
ರಾಜ್ಯ ಯುವ ಕಾರ್ಯದರ್ಶಿ ಸತ್ಯಜೀತ ಪಾಟೀಲ ಮಾತನಾಡಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಬೂತ್ಮಟ್ಟದಲ್ಲಿ ಕಮೀಟಿ ಮಾಡಬೇಕು. ಬ್ಲಾಕ್, ವಿಧಾನಸಭೆ ಮಟ್ಟದಲ್ಲಿ ಬ್ಲಾಕ್ ಮಾಡಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪುರಸಭೆ ಚುನಾವಣೆಗಳಿಗೆ ಈಗಿನಿಂದಲೇ ಸಿದ್ಧರಾಗುವಂತೆ ತಿಳಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ನಿಗಂ ಭಂಡಾರಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಭಜಂತ್ರಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಬಾಪುರಾಯ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಯುವ ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಸಚೀನಗೌಡ ಪಾಟೀಲ, ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ವಿಧಾನಸಭಾ ಯುವ ಘಟಕದ ಅಧ್ಯಕ್ಷ ಮೊಹ್ಮದಇಲಿಯಾಸ ಢವಳಗಿ, ದೀಪಕಗೌಡ, ಜಿಲ್ಲಾ ಅಧ್ಯಕ್ಷ ಮೊಯಿನ್ ಶೇಖ, ಪದಾಧಿಕಾರಿಗಳಾದ ಬಾಹುಬಲಿ, ಶ್ರೀಧರ, ಪುರಸಭೆ ಅಧ್ಯಕ್ಷ ಮೆಹಬೂಬ ಗೊಳಸಂಗಿ, ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಚಲವಾದಿ,ಮಹ್ಮದರಫೀಕ ಶಿರೋಳ ಮೊದಲಾದವರು ಇದ್ದರು. ಲಕ್ಷö್ಮಣ ಲಮಾಣಿ ನಿರೂಪಿಸಿದರು.
’ನನ್ನನ್ನು ಮಂತ್ರಿ ಮಾಡುತ್ತೇನೆ ಎಂದಿದ್ದರು: ನಾಡಗೌಡ
’ನಾನು 1983ರಿಂದ ರಾಜಕಾರಣದಲ್ಲಿದ್ದೇನೆ. ನನ್ನನ್ನು ಹಿಂದೆ ಮಂತ್ರಿ ಮಾಡುತ್ತೇನೆ ಎಂದು ಕರೆದಿದ್ದರೂ ಕೊನೆಯ ಪಕ್ಷದಲ್ಲಿ ಹೆಸರು ಕೈಬಿಟ್ಟರು.1983ರಲ್ಲಿ ರಾಜಕಾರಣದಲ್ಲಿರುವ ನಾನು ಹಿರಿಯನೋ, 1993ರಲ್ಲಿ ರಾಜಕಾರಣಕ್ಕೆ ಬಂದವರು ಹಿರಿಯರೋ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಮಂತ್ರಿ ಹುದ್ದೆ ಸಿಗಲಿಲ್ಲ ಎಂದು ಪಕ್ಷದ ವಿರುದ್ಧ ಎಂದಿಗೂ ನಾನು ಮಾತನಾಡಿಲ್ಲ. ಮಾತನಾಡುವುದೂ ಇಲ್ಲ ಎಂದು ಹೇಳಿದರು.
1985ರಲ್ಲಿ ಟಿಕೆಟ್ ನನಗೆ ಸಿಗಲಿಲ್ಲ. ಆಗ ಜೆ.ಎಸ್.ದೇಶಮುಖರು ತಮ್ಮ ಪಾರ್ಟಿಗೆ ಬರಲು ಹೇಳಿದರು. ಆದರೆ ನಾನು ನಿರಾಕರಿಸಿದೆ. ಟಿಕೆಟ್ ತರಲು ದಿಲ್ಲಿಗೆ ಹೋಗಲಿಲ್ಲ.ಅರ್ಜಿ ಹಾಕಿ ಮನೆಯಲ್ಲಿ ಕೂತಿದ್ದೇನೆ. ಮನೆಯವರಿಗೂ ತಂದು ನನಗೆ ಟಿಕೆಟ್ ಕೊಟ್ಟಿದ್ದಾರೆ. ಪಕ್ಷದ ನಿಷ್ಠೆ ಇದ್ದರೆ ಪಕ್ಷ ಗುರುತಿಸುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ನನ್ನ ಹಿಂದೆ ಮಾತನಾಡುವವರು ಎದುರಿಗೆ ಕೂತು ತಮ್ಮ ಅಸಮಾಧಾನಗಳನ್ನು ತೋಡಿಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.