ADVERTISEMENT

ಕಾಂಗ್ರೆಸ್ ಅನಾಥವಾಗಲಿದೆ: ಸಚಿವ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 13:17 IST
Last Updated 16 ಅಕ್ಟೋಬರ್ 2021, 13:17 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಸಿಂದಗಿ(ವಿಜಯಪುರ): ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಕೆಲವೇ ಅವಧಿಯಲ್ಲಿ ಉಳಿದಿರುವ ಎರಡು ರಾಜ್ಯಗಳೂ ಕೂಡ ಕಾಂಗ್ರೆಸ್ ಮುಕ್ತ ಆಗಲಿದೆ. ಕಾಂಗ್ರೆಸ್ ಅನಾಥವಾಗಿದೆ. ಇನ್ನು ಕೇವಲ ಒಂದೇ ವರ್ಷದಲ್ಲಿ ಕಾಂಗ್ರೆಸ್ ವಾರಸುದಾರ ಇಲ್ಲದ ಪಕ್ಷವಾಗುತ್ತದೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಇಲ್ಲಿಯ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮಿರದಿಂದ ಕನ್ಯಾಕುಮಾರಿಯವರೆಗೆ ಮುಸ್ಲಿಮರು, ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡುತ್ತಲೇ ಬಂದಿದೆ. ಕೇವಲ ಇವರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಮುಸ್ಲಿಮರಲ್ಲಿ ಜಯಂತಿ ಆಚರಣೆ ನಿಷಿದ್ದ. ಹೀಗಾಗಿ ಟಿಪ್ಪು ಸುಲ್ತಾನ್ ಜಯಂತಿಗೆ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಸಿದ್ಧರಾಮಯ್ಯನವರಿಗೆ ವಿರೋಧಿಸಿರುವ ಬಗ್ಗೆ ಇಬ್ರಾಹಿಂ ಅವರು ನೀಡಿರುವ ಹೇಳಿಕೆ ಸತ್ಯವಾದುದು. ಇಬ್ರಾಹಿಂ ಸಂದರ್ಭಕ್ಕನುಗುಣವಾಗಿ ಸತ್ಯ ಹೇಳ್ತಾರೆ ಎಂದರು.

ADVERTISEMENT

ಸಿದ್ಧರಾಮಯ್ಯ ಅಹಿಂದ ಸಂಘಟನೆಯಿಂದ ಯಾರನ್ನೂ ಉದ್ದಾರ ಮಾಡಿಲ್ಲ. ಬರೀ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಅಹಿಂದ ವರ್ಗವನ್ನು ಮೆಟ್ಟಿಲು ಮಾಡಿ ಮೇಲೆ ಏರಿದ್ದಾರೆ ಎಂದು ಕಾರಜೋಳ ಟೀಕಿಸಿದರು.

ಕಾಲೇಜಿಗೆ ಆದ್ಯತೆ:

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರಿಗೆ ಮತ ನೀಡಿದರೆ ಅಭಿವೃದ್ದಿಗೆ ಮತ ನೀಡಿದಂತೆ. ಮುಂಬರುವ 18 ತಿಂಗಳ ಅವಧಿಯಲ್ಲಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಪ್ರಾರಂಭಿಸಲಾಗವುದು. ಈಗಾಗಲೇ 5 ಲಕ್ಷ ಮನೆಗಳ ಹಂಚಿಕೆಗೆ ಸರ್ಕಾರ ಆದೇಶ ಮಾಡಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಅ.20 ಮತ್ತು 21 ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಶಾಸಕ ಜಗದೀಶ ಶೆಟ್ಟರ್‌, ಅ.21 ಮತ್ತು 22 ರಂದು ಸಚಿವ ಕೆ.ಎಸ್.ಈಶ್ವರಪ್ಪ, ಅ. 24 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಚುನಾವಣಾ ಉಸ್ತುವಾರಿ ಲಕ್ಷ್ಮಣ ಸವದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.