ತಿಕೋಟಾ: ರಂಜಾನ್ ಅಂಗವಾಗಿ ಶ್ರದ್ಧೆ, ಭಕ್ತಿಯಿಂದ ಉಪವಾಸ ಆಚರಣೆ ಮಾಡುವ ಜೊತೆಗೆ ಮುದ್ದೇಬಿಹಾಳ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಶುಶ್ರೂಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ತಿಕೋಟಾ ಗ್ರಾಮದ ಮಹ್ಮದ್ ರಫೀಕ್ ಬಾಗವಾನ.
ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರು ಚಿಕತ್ಸೆ ಪಡೆದು ಚೇತರಿಕೆಯಾದರೂ ಕೂಡಾಉಚಿತ ಆರೋಗ್ಯ ಸೇವೆ ಇದೆ ಎಂಬ ಕಾರಣಕ್ಕೆ ಇನ್ನೂ ಎರಡ್ಮೂರು ದಿನ ಚಿಕಿತ್ಸೆ ಕೊಡಿ ಎನ್ನುತ್ತಾರೆ. ಇದರಿಂದ ಹೊಸದಾಗಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಹಾಸಿಗೆ ಇಲ್ಲಂದತ್ತಾಗುತ್ತದೆ. ಆದ್ದರಿಂದ ಸಂಪೂರ್ಣ ಗುಣಮುಖರಾದ ರೋಗಿಗಳು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಬೇಕು ಎನ್ನುತ್ತಾರೆ ಅವರು.
ನಾವು ಸೇವೆ ನೀಡಲು ಹಿಂಜರಿಯುವುದಿಲ್ಲ. ವೈದ್ಯರು, ಶುಶ್ರೂಷಕ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗ ತಮ್ಮ ಕರ್ತವ್ಯವನ್ನು ನಿಷ್ಟೆಯಿಂದ ಮಾಡುತ್ತಿದ್ದಾರೆ. ದಯಾಮಯಿಯಾದ ಸೃಷ್ಟಿಕರ್ತ ದೇವರು ಎಲ್ಲರನ್ನು ಕಾಪಾಡುತ್ತಾನೆ ಎಂಬ ನಂಬಿಕೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ.
ಕರ್ತವ್ಯ ಮುಗಿಸಿ ಮನೆ ಹೋದ ನಂತರ ಮಕ್ಕಳು ನಮ್ಮತ್ತ ಬರುತ್ತವೆ. ಅವರಿಂದ ದೂರ ಉಳಿಯುವಂತೆ ಮಾಡಿ ಸಂಬಾಳಿಸುವುದೇ ಸವಾಲಾಗಿದೆ. ಕೊವಿಡ್ ಲಸಿಕೆಯನ್ನು ಪಡೆದಿದ್ದೇನೆ. ಜನರಿಗಾಗಿ ನಾವು ಸೇವೆಯಲ್ಲಿದ್ದೇವೆ, ನೀವು ನಮಗಾಗಿ ಮನೆಯಲ್ಲಿ ಇದ್ದು, ಆರೋಗ್ಯ ಇಲಾಖೆಗೋಸ್ಕರ ಪ್ರಾರ್ಥನೆ ಮಾಡಿ.
ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ತಗುಲದಿದ್ದರೂ ಮುಂಜಾಗ್ರತಾ ಕ್ರಮ ಅನುಸರಿಸುವದು ಸೂಕ್ತ. ದಿನಾಲು ಬಿಸಿನೀರು ಕುಡಿಯುವುದು, ಕಷಾಯ ಕುಡಿಯುವುದು, ಮಾಸ್ಕ್ ಕಡ್ಡಾಯ ಧರಿಸುವುದು, ಪರಸ್ಪರ ಅಂತರ ಕಾಪಾಡುವುದು ಸೇರಿದಂತೆ ವೈದ್ಯರು ತಿಳಿಸಿದ ಮುನ್ನೆಚ್ಚರಿಕೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎನ್ನುತ್ತಾರೆ ಅವರು.
ನಿರೂಪಣೆ: ಪರಮೇಶ್ವರ ಎಸ್.ಜಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.