ಎಂ.ಬಿ.ಎಲ್03 ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯ ಕೊಠಡಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಅತಿವೃಷ್ಟಿ ಹಾನಿ ಕುರಿತ ಮಾಹಿತಿ ನೀಡಿದರು.
ಮುದ್ದೇಬಿಹಾಳ: ಗ್ರಾಮ ಪಂಚಾಯಿತಿವಾರು ಜಂಟಿ ಸಮೀಕ್ಷೆ ನಡೆಸಿದ ಬಳಿಕ ರೈತ ಫಲಾನುಭವಿಗಳ ಯಾದಿ ಗ್ರಾಮ ಪಂಚಾಯಿತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚಾರ ಮಾಡಲಾಗುತ್ತದೆ. ನಂತರ ಏಳು ದಿನಗಳ ಕಾಲಾವಕಾಶ ನೀಡಿ,ಆಕ್ಷೇಪಣೆ ಬಂದ ರೈತರ ಅರ್ಜಿಗಳನ್ನು ಪರಿಶೀಲನೆ ನಡೆಸಿ ಬೆಳೆಹಾನಿ ರೈತ ಫಲಾನುಭವಿಗಳ ಯಾದಿ ಅಂತಿಮಗೊಳಿಸಿ ಕಂದಾಯ, ಕೃಷಿ ಇಲಾಖೆ ಜಂಟಿ ಸಹಿಯೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಕೊಠಡಿಯಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು ಅತಿವೃಷ್ಟಿ ಹಾನಿ ಕುರಿತು ಮಾಹಿತಿ ನೀಡಿದರು.
’ರೈತರು ಕಷ್ಟದಲ್ಲಿದ್ದಾರೆ.ಅವರಿಗೆ ತೊಂದರೆ ಮಾಡಬೇಕು.ಬೆಳೆ ಹಾನಿ ಆಗಿರುವ ಪ್ರಮಾಣ ಕಡಿಮೆ ತೋರಿಸಬೇಕು’ ಎಂಬ ಉದ್ದೇಶ ನಮಗಿಲ್ಲ ಎಂದರು.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಮಾರ್ಗಸೂಚಿಯನ್ವಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಧ್ಯ ಋತುವಿನ ಪ್ರತಿಕೂಲತೆ ಆವಾಹನೆ ಮಾಡಲಾಗಿದೆ. ತೊಗರಿ, ಹತ್ತಿ ಬೆಳೆಗೆ ವಿಮೆ ಮಾಡಿಸಿದ ಎಲ್ಲ ರೈತರಿಗೆ ವಿಮಾ ಮೊತ್ತದ ಶೇ.25ರಷ್ಟು ವಿಮಾ ಸಂಸ್ಥೆಯು ತಕ್ಷಣ ರೈತರ ಖಾತೆಗೆ ನೇರವಾಗಿ ನಗದನ್ನು ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.
ಹಂಗಾಮು ಮುಗಿದ ನಂತರ ಬೆಳೆವಾರು ಕಟಾವು ಪ್ರಯೋಗದ ಇಳುವರಿ ಆದಾರದ ಮೇಲೆ ಉಳಿದ ವಿಮಾ ಮೊತ್ತವನ್ನು ಇಳುವರಿ ಕೊರತೆ ಕಂಡು ಬಂದ ಗ್ರಾ.ಪಂ ಘಟಕವಾರು ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ಮಾತನಾಡಿ, ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ,ಹತ್ತಿ ಸೇರಿ ಒಟ್ಟು 1.21 ಲಕ್ಷ ಹೆಕ್ಟೆರ್ ಬಿತ್ತನೆ ಮಾಡಲಾಗಿದೆ.2025-26ನೇ ಸಾಲಿನಲ್ಲಿ ಫಸಲ ಭೀಮಾ ಯೋಜನೆಯಡಿ ಮುದ್ದೇಬಿಹಾಳ ತಾಲ್ಲೂಕಿನಲ್ಲಿ 8234,ತಾಳಿಕೋಟಿ ತಾಲ್ಲೂಕಿನಲ್ಲಿ 18273 ರೈತರು ಬೆಳೆವಿಮೆ ಮಾಡಿಸಿದ್ದಾರೆ.ಮುದ್ದೇಬಿಹಾಳ ತಾಲ್ಲೂಕಿನಲ್ಲಿ ತೊಗರಿಗೆ ವಿಮೇ ಮಾಡಿಸಿದ ರೈತರ ಸಂಖ್ಯೆ 5408 ಇದ್ದು 8343 ಹೆಕ್ಟೆರ್ ಬಿತ್ತನೆ ಕ್ಷೇತ್ರವಿದೆ.316 ರೈತರು ಹತ್ತಿ ಬೆಳೆಗೆ ವಿಮೆ ಮಾಡಿಸಿದ್ದು 332.59 ಹೆಕ್ಟೆರ್ ಕ್ಷೇತ್ರ ಹತ್ತಿ ಬಿತ್ತನೆ ಮಾಡಿದ್ದಾರೆ.ತಾಳಿಕೋಟಿ ತಾಲ್ಲೂಕಿನಲ್ಲಿ ತೊಗರಿಗೆ 12615 ರೈತರು ವಿಮೆ ಮಾಡಿಸಿದ್ದು 22406.5 ಹೆಕ್ಟೆರ್ ಬಿತ್ತನೆ ಮಾಡಿದ್ದಾರೆ.ಹತ್ತಿ ಬೆಳೆಗೆ 1686 ರೈತರು ವಿಮೆ ಮಾಡಿಸಿದ್ದು 1974.66 ಹೆಕ್ಟೆರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ತಾಪಂ ಪ್ರಭಾರ ಇಒ ವೆಂಕಟೇಶ ವಂದಾಲ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಇನ್ನಿತರರು ಇದ್ದರು.
ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಜನವರಿಯಿಂದ ಅಕ್ಟೋಬರ್ 2ರವರೆಗೆ ಸಾಮಾನ್ಯ 496. ಮಿ.ಮಿ ಮಳೆ ಇದ್ದು ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 796.6 ಮಿ.ಮಿ ಮಳೆ ಆಗಿದೆ. ಶೇ.61 ರಷ್ಟು ಮಳೆ ಹೆಚ್ಚಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.
ತಹಶೀಲ್ದಾರ್ ಕೀರ್ತಿ ಚಾಲಕ ಮಾತನಾಡಿ, ಅತಿವೃಷ್ಟಿಯಿಂದ ತಾಲ್ಲೂಕಿನಲ್ಲಿ 145 ಮನೆಗಳು ಬಿದ್ದಿದ್ದು ಅದರಲ್ಲಿ 89 ಮನೆಗಳಿಗೆ ತಲಾ ₹5200 ನಂತೆ ಪರಿಹಾರ ನೀಡಲಾಗಿದ್ದು 5 ಮನೆಗಳಿಗೆ ₹30 ಸಾವಿರ ಪರಿಹಾರ ನೀಡಲಾಗಿದೆ. ನಾಗಬೇನಾಳ,ನೇಬಗೇರಿಯಲ್ಲಿ ತೋಳದ ದಾಳಿಗೆ ಒಳಗಾಗಿ ಮೃತಪಟ್ಟ ಕುರಿಗಳಿಗೆ ಸಂಬAಧಿಸಿದ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ ಎಂದು ಶಾಸಕ ನಾಡಗೌಡ ತಿಳಿಸಿದರು.
ಸಮೀಕ್ಷೆ: ಬೆಳೆಹಾನಿಯಾದ ಜಮೀನುಗಳಿಗೆ ಕೃಷಿ,ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಜಿಪಿಎಸ್ ಫೋಟೋ ದಾಖಲೆಯೊಂದಿಗೆ ಸರ್ವೆ ನಡೆಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.