ADVERTISEMENT

ಕಾರಜೋಳರಿಂದ ದಲಿತ ಟ್ರಂಪ್‌ಕಾರ್ಡ್‌ ಬಳಕೆ: ಚಲವಾದಿ ಸಮಾಜದಿಂದ ಖಂಡನೆ

ವಿಜಯಪುರ ಜಿಲ್ಲಾ ಚಲವಾದಿ ಸಮಾಜದಿಂದ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 15:31 IST
Last Updated 18 ಜನವರಿ 2022, 15:31 IST
ಚಂದ್ರಶೇಖರ ಕೊಡಬಾಗಿ
ಚಂದ್ರಶೇಖರ ಕೊಡಬಾಗಿ   

ವಿಜಯಪುರ: ಮೇಕೆದಾಟು ನೀರಾವರಿ ಯೋಜನೆ ವಿವಾದದಲ್ಲಿ ಶಾಸಕ ಎಂ.ಬಿ.ಪಾಟೀಲ ವಿರುದ್ಧ ಜಾತಿ ಸಂಘಟನೆಗಳನ್ನು ಎತ್ತಿಕಟ್ಟುವ ಮೂಲಕ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ‘ದಲಿತ’ ಟ್ರಂಪ್‌ ಕಾರ್ಡ್‌ ಬಳಕೆ ಮಾಡುತ್ತಿರುವುದು ಖಂಡನೀಯ ಎಂದು ಜಿಲ್ಲಾ ಚಲವಾದಿ ಸಮಾಜದ ಮುಖಂಡ ಚಂದ್ರಶೇಖರ ಕೊಡಬಾಗಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ಸಭ್ಯ ರಾಜಕಾರಣಿ ಎಂಬ ಗೌರವಕ್ಕೆ ಪಾತ್ರವಾಗಿದ್ದ ಕಾರಜೋಳ ಅವರು ಮೇಕೆದಾಟು ವಿವಾದಕ್ಕೆ ಸಂಬಂಧಿಸಿದಂತೆ ಎಂ.ಬಿ.ಪಾಟೀಲ ವಿರುದ್ಧಟೀಕೆ, ಟಿಪ್ಪಣಿ, ಆರೋಪಗಳಿಗೆ ಸೀಮಿತವಾಗದೇ ತಮ್ಮ ಸಮಾಜದ ಸಂಘಟನೆಗಳ ಮುಖಂಡರನ್ನು ಛೂ ಬಿಟ್ಟಿರುವುದು ಖಂಡನೀಯ ಎಂದರು.

ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ವಿಜಯಪುರ ಜಿಲ್ಲೆ ಹಾಗೂ ರಾಜ್ಯಕ್ಕೆ ಅನೇಕ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ಅವರ ವಿರುದ್ಧ ವೈಯಕ್ತಿಕ ತೇಜೋವಧೆ ಮತ್ತು ಅವಹೇಳನಕಾರಿ ಹೇಳಿಕೆಯು ಖಂಡನಾರ್ಹ ಎಂದು ಹೇಳಿದರು.

ADVERTISEMENT

ಬಸವಣ್ಣ, ಅಂಬೇಡ್ಕರ್‌ ಅವರ ಆಶಯಗಳಿಗೆ ವಿರುದ್ಧವಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವಲು ಕಾರಜೋಳ ಅವರು ತಮ್ಮ ಸ್ವಜಾತಿಯ ಮುಖಂಡರಿಂದ ಎಂ.ಬಿ.ಪಾಟೀಲ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ಕೊಡಿಸುವ ನಡವಳಿಕೆ ಸರಿಯಲ್ಲ ಎಂದರು.

ಎಸ್‌ಸಿ, ಎಸ್‌ಟಿ ಪರ ಯೋಜನೆಗಳಾದ ಎಸ್‌ಸಿಪಿ,ಟಿಎಸ್‌ಪಿ ಅನುದಾನವನ್ನು ₹5 ಲಕ್ಷದಿಂದ ₹1 ಲಕ್ಷಕ್ಕೆ ಇಳಿಸಿರುವ ಇವರ ಕಾರ್ಯ ದಲಿತ ಪ‍ರ ಕಾಳಜಿ ಎಷ್ಟೆಂಬುದುನ್ನು ತೋರಿಸುತ್ತದೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿ ಪ್ರಾಮಾಣಿಕ ಹೋರಾಟ ಮಾಡಿ ರಾಜಕೀಯ ಪ್ರವೇಶ ಮಾಡಿರುವ ಪ್ರೊ.ರಾಜು ಆಲಗೂರ ಶಾಸಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆದರೆ, ಎಂದಿಗೂ ಸುಳ್ಳು ಜಾತಿ ನಿಂದನೆ ಪ್ರಕರಣವನ್ನು ಯಾರ ವಿರುದ್ಧವೂ ದಾಖಲಿಸಿಲ್ಲ. ಯಾವುದೇ ಪ್ರಕರಣಕ್ಕೂ ಪ್ರಚೋದನೆ ನೀಡಿಲ್ಲ. ಎಲ್ಲ ವರ್ಗ, ಸಮಾಜದ ಜೊತೆ ಸೌಹಾರ್ದಯುತ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ ಎಂದರು.

ಸುರೇಶ ಗೊಣಸಗಿ ಮಾತನಾಡಿ,ಎ.ಬಿ.ಪಾಟೀಲ ಅವರ ವಿರುದ್ಧ ಬಬಲೇಶ್ವರ, ತಿಕೋಟಾ, ವಿಜಯಪುರದಲ್ಲಿ ಜಾತಿನಿಂದನೆ ದೂರು ದಾಖಲಿಸಲು ಮುಂದಾಗಿರುವುದು ಖಂಡನೀಯ ಎಂದರು.

ಅಡಿವೆಪ್ಪ ಸಾಲಗಲ್‌ ಮಾತನಾಡಿ, ಇಬ್ಬರು ನಾಯಕರ ರಾಜಕೀಯ ಕಿತ್ತಾಟದಲ್ಲಿ ವಿನಃ ಕಾರಣ ಜಾತಿ ಎಳೆದು ತರುವುದು ಸರಿಯಲ್ಲ. ಜಾತಿಯನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುವುದು ಖಂಡನೀಯ ಎಂದರು.

ಛಲವಾದಿ ಸಮಾಜವು ಶಾಸಕ ಎಂ.ಬಿ.ಪಾಟೀಲ ಅವರ ಜೊತೆ ಇದೆ. ಮುಂದೆಯೂ ಅವರ ಜೊತೆ ಇರಲಿದೆ ಎಂದು ಹೇಳಿದರು.

ಮುಖಂಡರಾದ ರಾಹುಲ್‌ ಕುಬಕಡ್ಡಿ, ಅಶೋಕ ಚಲವಾದಿ, ಸುನೀಲ ಉಕ್ಕಲಿ, ಕುಮಾರ ಶಹಪೂರ, ತಮ್ಮಣ್ಣ ಮೇಲಿನಕೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

* ಎಂ.ಬಿ.ಪಾಟೀಲರ ಹಾಗೂ ಕಾಂಗ್ರೆಸ್‌ ಸಾಧನೆ ಸಹಿಸದ ಕಾರಜೋಳ ಅವರು ತಮ್ಮ ಮುಂದಿನ ರಾಜಕೀಯ ವಿಫಲತೆ ಮನಗಂಡು ಹತಾಶ ಮನೋಭಾವನೆಯಿಂದ ಅಪಪ್ರಚಾರ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು.

–ಚಂದ್ರಶೇಖರ ಕೊಡಬಾಗಿ, ಚಲವಾದಿ ಸಮಾಜದ ಮುಖಂಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.