ಪ್ರಜಾವಾಣಿ ವಾರ್ತೆ
ತಾಳಿಕೋಟೆ: ‘ಪಟ್ಟಣವು ತಾಲ್ಲೂಕು ಕೇಂದ್ರವಾಗಿ ಪರಿವರ್ತನೆಗೊಂಡ ನಂತರ ಕ್ಷಿಪ್ರವಾಗಿ ಬೆಳೆಸು, ವಿಸ್ತಾರಗೊಂಡಿದೆ. ಪಟ್ಟಣದ ನಾಗರಿಕರು ತಮ್ಮ ಅಗತ್ಯ ಕಾರ್ಯಗಳಿಗಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ತೊಂದರೆ ಆಗುತ್ತಿದ್ದು, ಸಾರ್ವಜನಿಕರಿಗೆ ಸಂಚಾರದ ಅನುಕೂಲಕ್ಕಾಗಿ ಪಟ್ಟಣದಲ್ಲಿ ನಗರ ಸಾರಿಗೆ ಸಂಚಾರ ಆರಂಭಿಸಬೇಕು’ ಎಂದು ಒತ್ತಾಯಿಸಿ ಇಲ್ಲಿಯ ನಾಗರಿಕರು ಘಟಕ ವ್ಯವಸ್ಥಾಪಕ ಎ.ಬಿ.ಭೋವಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
‘ದೇವರಹಿಪ್ಪರಗಿ ರಸ್ತೆಯಿಂದ ಬಸ್ ನಿಲ್ದಾಣಕ್ಕೆ 3 ಕಿ.ಮೀ, ಸೋಮನಾಳ ರಸ್ತೆಯಿಂದ ಬಸ್ ನಿಲ್ದಾಣಕ್ಕೆ 2 ಕಿ.ಮೀಗಿಂತ ಹೆಚ್ಚು ಅಂತರವಿದೆ. ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಸವೇಶ್ವರ ವೃತ್ತದ ಮಾರ್ಗವಾಗಿ ಹೋಗಬೇಕು. ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ನಾಗರಿಕರ ಸಮಯ ಉಳಿತಾಯಕ್ಕೆ ಅನುಕೂಲಕ್ಕಾಗಿ ನಗರ ಸಾರಿಗೆ ಸಂಚಾರ ಆರಂಭಿಸಬೇಕು’ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
‘ಈಗಾಗಲೇ ಮುದ್ದೇಬಿಹಾಳ ಮತ್ತು ಸಿಂದಗಿಯಲ್ಲಿ ಸಿಟಿ ಬಸ್ ಸೇವೆ ಆರಂಭವಾಗಿದ್ದು, ತಾಳಿಕೋಟೆಗೂ ಈ ಸೇವೆಯನ್ನು ವಿಸ್ತರಿಸಬೇಕು’ ಎಂದು ಶ್ರೀಕಾಂತ ಪತ್ತಾರ ಆಗ್ರಹಿಸಿದರು.
ಈ ವೇಳೆ ಪಟ್ಟಣದ ನಾಗರಿಕರಾದ ಬಸವರಾಜ ಜಾಗಟಗಲ್, ಶರಣಬಸವ ಆವಂತಿ, ಮಲ್ಲನಗೌಡ ಬಿರಾದಾರ, ರಾಜು ದೊಡ್ಡಮನಿ, ಉದಯಕುಮಾರ ಬಳಗಾನೂರ, ಮಹಬೂಬಶಾ ಮಕಾನದಾರ, ಸುಧಾ ಸಕ್ರಿ, ಬಿ.ಜಿ.ಕೊಣ್ಣೂರ, ರಾಜೇಶ್ವರಿ ಕುಳಗೇರಿ, ಶಂಕರಗೌಡ ಬಿರಾದಾರ, ಬಸಪ್ಪ ಆದವಾನಿ, ಶ್ರೀದೇವಿ ಅರಬಿ, ವಿಜಯಲಕ್ಷ್ಮಿ ಅರವಿ, ಗಿರೀಶ ಪಾಟೀಲ, ಈರಮ್ಮ ಪಾಟೀಲ, ರೇಖಾ ಪಾಟೀಲ, ಭಾಗ್ಯಶ್ರೀ ಪಾಟೀಲ, ಕಾವ್ಯ ಮದ್ರಾಸಿ, ಎನ್.ಎಂ. ಅಮಲ್ಯಾಳ, ಕಾಶಿನಾಥ ಶಿವಣಗಿ, ಬಸ್ಸು ಇಜೇರಿ, ವೀರೇಶ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.