ADVERTISEMENT

ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 12:15 IST
Last Updated 3 ಡಿಸೆಂಬರ್ 2021, 12:15 IST
ಕಾಳಗಿ ತಹಶೀಲ್ದಾರ್ ಕಚೇರಿ ಮುಂದೆ ಭಾರತ ಕಮ್ಯೂನಿಸ್ಟ್ ಪಕ್ಷದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು
ಕಾಳಗಿ ತಹಶೀಲ್ದಾರ್ ಕಚೇರಿ ಮುಂದೆ ಭಾರತ ಕಮ್ಯೂನಿಸ್ಟ್ ಪಕ್ಷದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಕಾಳಗಿ: ‘ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು ಅವರ ಮೇಲಿನ ಕೋಮು ಹಿಂಸಾಚಾರವನ್ನು ನಿಲ್ಲಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು’ ಎಂಬ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದ) ಸಿಪಿಐಎಂ ಮುಖಂಡರು ಶುಕ್ರವಾರ ಪಟ್ಟಣದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

‘ಕೋಮು ಹಿಂಸಾಚಾರವನ್ನು ಸೃಷ್ಟಿಸುವ ಪುಂಡಾಟಿಕೆಯ ಗುಂಪುಗಳ ಮೇಲೆ ಹದ್ದಿನ ಕಣ್ಣಿಟ್ಟು ಅವುಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣವಾಗಿ ಕ್ರಮ ವಹಿಸಬೇಕು. ಕೋಮು ದ್ವೇಷದ ಹಿಂಸಾಚಾರದಲ್ಲಿ ಹಿಂಸೆಗೊಳಗಾದ ಎಲ್ಲರಿಗೂ ಸೂಕ್ತ ಪರಿಹಾರ ಮತ್ತು ಪ್ರಾಣ ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು. ರಾಜ್ಯ ಸರ್ಕಾರ ನಿಲ್ಲಿಸಿರುವ ವಿದ್ಯಾರ್ಥಿ ವೇತನವನ್ನು ಪುನರ್ ಆರಂಭಿಸಬೇಕು. ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ 2020ನ್ನು ಕೂಡಲೇ ವಾಪಸ್ ಪಡೆಯಬೇಕು ಇದರಿಂದಾಗಿ ಉದ್ಯೋಗ ಕಳೆದುಕೊಂಡ ಹಾಗೂ ಆರ್ಥಿಕ ನಷ್ಟ ಹೊಂದಿದ ಖುರೇಷಿಗಳಿಗೆ ತಲಾ ಕನಿಷ್ಠ ₹1 ಲಕ್ಷ ಪರಿಹಾರ ನೀಡಬೇಕು. ಹೊಸ ಉದ್ಯೋಗದಲ್ಲಿ ತೊಡಗಲು ಸಹಾಯ ಧನದ ನೆರವು ಪ್ರಕಟಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಕಾಳಗಿ ಪಟ್ಟಣದಲ್ಲಿ ವಿವಿಧೆಡೆ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳು ಪ್ರಾರಂಭವಾಗಿವೆ ಅವು ಸಂಪೂರ್ಣ ಕಳಪೆಮಟ್ಟದಿಂದ ಕೂಡಿದ್ದು ಸಂಬಂಧಿಸಿ ಸರ್ಕಾರದ ಹಣ ದುರುಪಯೋಗ ಮಾಡುತ್ತಿರುವ ಕುರಿತು ತನಿಖೆ ಕೈಗೊಳ್ಳಬೇಕು’ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಮುಖಂಡ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.

ADVERTISEMENT

ಮುಖಂಡ ಗುರುನಂದೇಶ ಕೋಣಿನ, ಮಲ್ಲಮ್ಮ ಕೋಡ್ಲಿ, ಕಾಶಿನಾಥ ಬಂಡಿ, ಸಿದ್ದಯ್ಯಸ್ವಾಮಿ, ರಾಮಚಂದ್ರ ಹೊಸಳ್ಳಿ, ಗುಂಡಪ್ಪ ಅರಣಕಲ್, ದಿಲೀಪ್ ನಾಗೂರೆ, ಪರಮೇಶ್ವರ ಕಾಂತಾ, ಸಿದ್ದು ಅಲ್ಲಾಪುರ, ಶಿವರಾಜ ಮೊಘ, ಜಗನ್ನಾಥ ಅರಣಕಲ್ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.